ಸಿದ್ದಾಪುರ, ಆ. 30: ಹಾಡಹಗಲೇ ಕಾಫಿ ತೋಟದೊಳಗೆ ಅಕ್ರಮವಾಗಿ ಬೀಟಿ ಮರಗಳನ್ನು ಕತ್ತರಿಸಿ ನಾಟಾಗಳನ್ನಾಗಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೊಂಡಂಗೇರಿಯಲ್ಲಿ ನಡೆದಿದೆ.

ಕೊಂಡಂಗೇರಿ ಕೊಪ್ಪದ ನಿವಾಸಿಯಾಗಿರುವ ಹುಸೈನಾರ್ ಎಂಬವರು ತಮ್ಮ ಕುಟುಂಬದವರೊಂದಿಗೆ ಊರಿಗೆ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭದಲ್ಲಿ ಮನೆಯ ಹಿಂಭಾಗದ ಕಾಫಿ ತೋಟದಲ್ಲಿದ್ದ ಒಣಗಿದ ಬೀಟಿ ಮರವನ್ನು ಯಾರೋ ಕಳ್ಳರು ಕತ್ತರಿಸಿ ನಾಟಾಗಳನ್ನಾಗಿ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಿದ್ದಾಪುರ ಪೊಲೀಸರು ಕಾಫಿ ತೋಟದೊಳಗೆ ಧಾಳಿ ನಡೆಸಿದರು.

ಈ ಸಂದರ್ಭ ಕಳ್ಳರು ಕಾಫಿ ತೋಟದೊಳಗೆ ಗಿಡಗಳ ಮಧ್ಯೆ ನುಸುಳಿ ಪರಾರಿಯಾಗಿದ್ದಾರೆ. ಪೊಲೀಸರು ಸಾಗಾಟ ಮಾಡಲು ಸಿದ್ಧಪಡಿಸಿದ್ದ ನಾಟಗಳನ್ನು ಹಾಗೂ ಮರ ಕತ್ತರಿಸಲು ಬಳಸಿದ್ದ ಗರಗಸವನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಸೆರೆ ಹಿಡಿಯಲು ಕ್ರಮಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ, ಮುಖ್ಯ ಪೇದೆ ಪಿ.ಟಿ. ಶ್ರೀನಿವಾಸ್, ಸಿಬ್ಬಂದಿ ಸಂತೋಷ್ ಚವ್ವಾಣ್ ಪಾಲ್ಗೊಂಡಿದ್ದರು.