ಶ್ರೀಮಂಗಲ, ಆ. 29: ಕೊಡವ ಸಮುದಾಯದಲ್ಲಿ ಹುಟ್ಟಿರುವ ನಾವೆಲ್ಲರೂ ನಮ್ಮ ದೈನಂದಿನ ಬದುಕಿನಲ್ಲಿ ಜನಾಂಗದ ರಾಯಬಾರಿ ಗಳಾಗಿದ್ದು, ನಮ್ಮ ಜನಾಂಗವನ್ನು ಸಕಾರಾತ್ಮಕವಾಗಿ ಪ್ರತಿನಿಧಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲೆಯೂ ಇದೆ. ಅದನ್ನು ಸಮಗ್ರ ವಾಗಿ ನಿಭಾಯಿಸುವ ನಿಟ್ಟಿನಲ್ಲಿ ಯುವ ಜನತೆಯ ಪಾತ್ರ ಪ್ರಮುಖವಾಗಿದೆ ಎಂದು ಯುನೈಟೆಡ್ ಕೊಡವ ಅರ್ಗನೈಸೆಷನ್ (ಯುಕೊ) ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಕರೆ ನೀಡಿದರು.

ಇತ್ತೀಚೆಗೆ ಮಂಗಳೂರಿನ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್‍ನ ನೂತನ ಅಡಳಿತ ಮಂಡಳಿಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ, ಕೆ.ಎಸ್.ಎ.ಯ ವಾರ್ಷಿಕ ಸಂಚಿಕೆ ಪೊಂಬಳಿ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಮಾತನಾಡಿದರು. ಜನಾಂಗದಲ್ಲಿ ಹುಟ್ಟಿದ ನಮಗೆ ನಮ್ಮ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳ ಬೇಕಾಗಿದೆ. ಹಾಗೆಯೇ ಪೋಷಕರು, ಒಡಹುಟ್ಟಿದವರು, ಐನ್‍ಮನೆ, ಕಾರೋಣ, ಹಾಗೂ ನಮ್ಮ ಮನೆತನದ ಬಗ್ಗೆ ಅತೀವ ಗೌರವವನ್ನು ಉಳಿಸಿಕೊಳ್ಳುವದರ ಮೂಲಕ ಜನಾಂಗದ ಪ್ರತಿಯೊಬ್ಬ ವ್ಯಕ್ತಿಗೂ ಗೌರವವನ್ನು ನೀಡಿ ನಮ್ಮ ಆಚಾರ ವಿಚಾರಗಳನ್ನು ಅಭಿಮಾನದಿಂದ ಜೀವನದಲ್ಲಿ ಅಳವಡಿಸಿಕೊಳ್ಳುವದರ ಮೂಲಕ ಮಾತ್ರವೇ ನಮ್ಮ ಒಗ್ಗಟ್ಟನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಮಂಗಳೂರಿನ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್‍ನ ಪೋಷಕ ಸಲಹೆಗಾರ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷÀ ಸೋಮೆಯಂಡ ಚಂಗಪ್ಪ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಜನಾಂಗದ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಕೊಡವ ಹಬ್ಬ ಹರಿದಿನಗಳನ್ನು ಆಚರಿಸುವಾಗ ಕೊಡಗಿನಲ್ಲಿ ಕುಟುಂಬದೊಂದಿಗೇ ಆಚರಿಸುವಂತಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಬದುಕಿನಲ್ಲಿ ಏನಾದರೊಂದು ಸಾಧನೆ ಮಾಡುವತ್ತ ತಮ್ಮ ಧ್ಯೇಯವನ್ನು ಕೇಂದ್ರಿಕರಿಸಬೇಕು, ನಮ್ಮ ಯುವಜನತೆ ಯಾವದೇ ಕಾರಣಕ್ಕೂ ಅಂತರ್ಜಾತಿ ವಿವಾಹ ಪಿಡುಗಿಗೆ ಬಲಿಯಾಗಬಾರದೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಸೆಂಟ್‍ಅಲೋಷಿಯೆಸ್, ಸೆಂಟ್ ಆಗ್ನೀಷ್, ಸೆಂಟ್‍ಫಿಲೋಮಿನ, ಸಹ್ಯಾರ್ದಿ ತಾಂತ್ರಿಕ ಕಾಲೇಜು, ಕೆನರಾ, ಎಸ್‍ಡಿಎಂ, ಮಣಿಪಾಲ್ ವಿಶ್ವವಿದ್ಯಾಲಯ, ಕೆಎಸ್ ಹೆಗ್ಗಡೆ ಕಾಲೇಜ್, ಮೈಟ್ ಕಾಲೇಜು, ಆಳ್ವಾಸ್ ಕಾಲೇಜು, ಶ್ರೀನಿವಾಸ್ ಹೊಟೇಲ್ ಮೇನ್‍ಜ್‍ಮೆಂಟ್ ಕಾಲೇಜು, ಮಹೇಶ್ ಹಾಗೂ ಶ್ರೀದೇವಿ ಕಾಲೇಜು ಮತ್ತು ಮೆರೈನ್ ಕಾಲೇಜ್‍ನ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಕೆಎಸ್‍ಎ ಸಲಹೆಗಾರÀ ಬಟ್ಟಿರ ಅಜಿತ್ ಬೋಪಯ್ಯ, ಅಧ್ಯಕ್ಷÀ ಓಡಿಯಂಡ ಗಗನ್ ಪೂಣಚ್ಚ, ಉಪಾಧ್ಯಕ್ಷೆ ಮುಕ್ಕಾಟಿರ ನೇಹಾ ಬೋಜಮ್ಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆಎಸ್‍ಎ ನ ನಿಕಟಪೂರ್ವ ಹಾಗೂ ಪೂರ್ವ ಅಧ್ಯಕ್ಷರುಗಳು, ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.