ವೀರಾಜಪೇಟೆ, ಆ. 31: ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯದ ಗೋಪುರದಲ್ಲಿ ವಿದ್ಯುತ್ ದುರಸ್ತಿ ಪಡಿಸುತ್ತಿದ್ದಾಗ ಗುತ್ತಿಗೆದಾರರ ಸಹಾಯಕ ಯೋಗೀಶ್ (27) ಎಂಬ ಯುವಕ ಆಕಸ್ಮಿಕವಾಗಿ ಬಿದ್ದು ಗಂಭೀರ ಪರಿಸ್ಥಿತಿಯಲ್ಲಿ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

ಇಂದು ಅಪರಾಹ್ನ 1.30ರ ಸಮಯದಲ್ಲಿ ಗೋಪುರದಲ್ಲಿ ವಿದ್ಯುತ್ ಸಂಪರ್ಕ ದುರಸ್ತಿಪಡಿಸಿ ಊಟ ಮಾಡಲು ಇಳಿಯುತ್ತಿದ್ದಾಗ ಕಾಲು ಜಾರಿ ಆಕಸ್ಮಿಕವಾಗಿ ರಸ್ತೆ ಅಂಚಿಗೆ ಬಿದ್ದು ತಲೆಗೆ ಕಲ್ಲು ಬಡಿದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಯೋಗೀಶ್‍ನನ್ನು ಆಸ್ಪತ್ರೆಯ ಇಂಟೆನ್ಸಿವ್ ಕೇರ್‍ನಲ್ಲಿ (ಐ.ಸಿ.ಯು.) ದಾಖಲು ಮಾಡಿದ್ದು ಯುವಕನ ಪರಿಸ್ಥಿತಿ ಬಗ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಏನನ್ನು ಹೇಳುತ್ತಿಲ್ಲವೆನ್ನಲಾಗಿದೆ.

ದೇವಾಲಯದ ಆಡಳಿತ ಮಂಡಳಿ ಆಕಸ್ಮಿಕ ಘಟನೆ ಕುರಿತು ನಗರ ಪೊಲೀಸರಿಗೆ ದೂರು ನೀಡಿರುವದಾಗಿ ತಿಳಿದು ಬಂದಿದೆ. ಯುವಕ ಯೋಗೀಶ್ ಮಂಗಳೂರಿನ ವಿದ್ಯುತ್ ಗುತ್ತಿಗೆದಾರರ ಸಹಾಯಕನಾಗಿ ವೀರಾಜಪೇಟೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.