*ಗೋಣಿಕೊಪ್ಪಲು, ಸೆ. 2: ಜಾತಿ ಧರ್ಮ ಬಿಟ್ಟು ರಾಜಕೀಯ ರಹಿತವಾಗಿ ಹಿರಿಯರ ಸಲಹೆಯೊಂದಿಗೆ 39ನೇ ವರ್ಷದ ದಸರಾ ಆಚರಣೆಗೆ ಮುಂದಾಗುತ್ತೇವೆ ಎಂದು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಹೇಳಿದ್ದಾರೆ.ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ಪೂರ್ವಭಾವಿ ಹಾಗೂ ಹಿರಿಯರ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು. ಹಿರಿಯರು ಹಾಕಿಕೊಟ್ಟ ದಸರಾ ಆಚರಣೆಯ ಹಾದಿಯಲ್ಲಿ ಈ ಬಾರಿ ವಿಭಿನ್ನ ಆಚರಣೆಯೊಂದಿಗೆ ಜನರಿಗೆ ಮನರಂಜನೆ ನೀಡಲಿದ್ದೇವೆ. ಸರಕಾರದ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಆಚರಣೆಗೆ ವೇದಿಕೆ ನಿರ್ಮಿಸುತ್ತೇವೆ ಎಂದರು.

ಸರಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ ದಸರಾ ಆಚರಣೆ ನಡೆಸುತ್ತೇವೆ. ದುಂದು ವೆಚ್ಚಗಳಿಗೆ ಅವಕಾಶ ಕೊಡದೆ ಸಮಿತಿಯ ಸದಸ್ಯರುಗಳನ್ನು ವಿಶ್ವಾಸಕ್ಕೆ ಪಡೆದು ಆಚರಣೆಗೆ ಮುಂದಾಗಿದ್ದೇವೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಜನರ ಮನರಂಜನೆಗಾಗಿ ಹೊರ ಜಿಲ್ಲೆಗಳ ಕಲಾವಿದರ ತಂಡಗಳನ್ನು ಈ ವೇದಿಕೆಯಲ್ಲಿ ಅನಾವರಣಗೊಳಿಸ ಲಾಗುತ್ತದೆ ಎಂದು ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ತಿಳಿಸಿದರು.

ಹೊಸ ಹುರುಪಿನೊಂದಿಗೆ ದಸರಾ ಆಚರಣೆಗೆ ಮುಂದಾಗಿರುವದು ಶ್ಲಾಘನೀಯ. ಜನರ ಭರವಸೆಗೆ ತಕ್ಕಂತೆ ಆಚರಣೆಗೆ ಕ್ರಮ ಕೈಗೊಳ್ಳಬೇಕೆಂದು ನಿಕಟಪೂರ್ವ ಅಧ್ಯಕ್ಷ ಬಿ.ಡಿ, ಮುಕುಂದ ತಿಳಿಸಿದರು.

ಮನಸ್ಸುಗಳನ್ನು ಒಂದು ಗೂಡಿಸುವ ಸದರಾ ಆಚರಣೆಯಲ್ಲಿ ಹಿರಿಯರ ಮಾರ್ಗದರ್ಶನ ಪಡೆದು 39ನೇ ವರ್ಷದ ದಸರಾವನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸುವಂತೆ ಆಚರಿಸಬೇಕು ಎಂದು ಚಡ್‍ಖಾನ್ ರಫೀಕ್ ಸಲಹೆ ನೀಡಿದರು.

(ಮೊದಲ ಪುಟದಿಂದ) ತಾಲೂಕಿನ ಸರಕಾರಿ ಇಲಾಖೆಗಳನ್ನು ಹಾಗೂ ವಿವಿಧ ಸಂಘಸಂಸ್ಥೆಗಳನ್ನು ಗಣನೆಗೆ ತೆಗೆದುಕೊಂಡು ಶಾಸಕರ ಸಲಹೆ ಸೂಚನೆಯಂತೆ ಆಚರಣೆಗೆ ಮುಂದಾಗಿ ಎಂದು ಹೆಚ್.ಕೆ. ಜಗದೀಶ್ ಸಲಹೆ ನೀಡಿದರು.

ದುಂದು ವೆಚ್ಚ ಮಾಡದೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಿರಿಕಿರಿ ಉಂಟುಮಾಡುವ ವಾತಾವರಣ ಸೃಷ್ಟಿಸದೆ ಆಚರಣೆಗೆ ಮುಂದಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ತಿಳಿಸಿದರು. ಬಾಲಕೃಷ್ಣ ರೈ,ಸುಮಿ ಸುಬ್ಬಯ್ಯ, ಕುಪ್ಪಂಡ ಗಣೇಶ್ ಸಲಹೆ ನೀಡಿದರು.

ಈ ಸಂದÀರ್ಭ ನಿರ್ಗಮಿತ ಕಾರ್ಯಾಧ್ಯಕ್ಷ, ಕುಲ್ಲಚಂಡ ಬೋಪಣ್ಣ, ಹಿರಿಯರಾದ ರಾಮಾಚಾರ್, ಶ್ರೀ ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಖಜಾಂಜಿ ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಯುವ ದಸರಾ ಸಮಿತಿ ಅಧ್ಯಕ್ಷ ಜಮ್ಮಡ ಸೋಮಣ್ಣ, ಸಮಿತಿ ಪದಾಧಿಕಾರಿಗಳಾದ ಮುರುಗ, ಸತೀಶ್ ಸಿಂಗಿ, ರತಿ ಅಚ್ಚಪ್ಪ, ಸುರೇಶ್ ರೈ ಸೇರಿದಂತೆ ಹಲವರು ಹಾಜರಿದ್ದರು.