ಮೂರ್ನಾಡು, ಸೆ. 2: ಕುಂಬಳದಾಳು ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮುತ್ತಾರುಮುಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಸುಪ್ರೀಂ ಕೋರ್ಟ್ ಆದೇಶದನ್ವಯ ಪಟ್ಟಣದಲ್ಲಿ ನಾಲ್ಕು ಮದ್ಯದಂಗಡಿಗಳು ಮುಚ್ಚಿವೆ. ಈಗ ಒಂದು ಮದ್ಯದಂಗಡಿ ಕುಂಬಳದಾಳು ರಸ್ತೆಯಲ್ಲಿ ತೆರೆಯುವ ಹುನ್ನಾರ ನಡೆಯುತ್ತಿದೆ.

ಮದ್ಯದಂಗಡಿ ತೆರೆಯುವ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಶಾಲೆ ಇದ್ದು, ಇದರಿಂದ ಶಾಲಾ ಮಕ್ಕಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು. ಕುಂಬಳದಾಳು ಸಾಗುವ ರಸ್ತೆ ತೀರ ಕಿರಿದಾಗಿದ್ದು ಬಸ್ಸು ಹಾಗೂ ಶಾಲಾ ವ್ಯಾನುಗಳ ಸಂಚಾರಕ್ಕೆ ತೊಡಕುಂಟಾಗುವದಲ್ಲದೆ ಈ ಭಾಗದ ಜನರಿಗೆ ನಿತ್ಯ ಕಿರಿಕಿರಿ ಉಂಟಾಗಲಿದೆ. ಆದರಿಂದ ಯಾವದೇ ಕಾರಣಕ್ಕೂ ಮದ್ಯದಂಗಡಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ, ಅಬಕಾರಿ ಇಲಾಖೆ ಹಾಗೂ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು. ಗ್ರಾಮದ ಬಾಲಕರ ವಿನಾಯಕ ಸಂಘ, ಗಂಗೋತ್ರಿ ಸಂಘ, ಅಕ್ಷಯ ಸ್ವ ಸಹಾಯ ಸಂಘ ಹಾಗೂ ಮುತ್ತಾರುಮುಡಿ ನಿವಾಸಿಗಳು ಮನವಿ ಸಲ್ಲಿಸಲು ಭಾಗವಹಿಸಿದ್ದರು.