ಗೋಣಿಕೊಪ್ಪ, ಸೆ. 6 : ಇತ್ತೀಚೆಗೆ ನಾಪೋಕ್ಲುವಿನ ಯವಕಪಾಡಿ ಭಗವತಿ ದೇವಸ್ಥಾನದ ಮುಂಬಾಗಿಲಿಗೆ ಕೊಳೆತ ದನದ ಕಾಲುಗಳನ್ನು ನೇತು ಹಾಕಿ ದೇವಾಲಯವನ್ನು ಅಪವಿತ್ರಗೊಳಿಸಿರು ವದರ ಹಿಂದೆ ಪಿಎಫ್‍ಐ ಹಾಗೂ ಎಸ್‍ಡಿಪಿಐ ಕಾರ್ಯಕರ್ತರ ಕೈವಾಡ ಇದೆ ಎಂದು ವೀರಾಜಪೇಟೆ ತಾಲೂಕು ವಿಶ್ವಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಉದ್ದಪಂಡ ಜಗತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊಡಗಿನಲ್ಲಿ ಸಾಕಷ್ಟು ಗಲಭೆಗಳಲ್ಲಿ ಈ ಎರಡೂ ಸಂಘಟನೆಗಳ ಹೆಸರು ಮುಂಚೂಣಿಯಲ್ಲಿದ್ದು, ಈ ಕೃತ್ಯದಲ್ಲೂ ಇವರ ಕೈವಾಡ ಇರಬಹುದು ಎಂಬ ಸಂಶಯವಿದ್ದು, ಈ ವಿಷಯದ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

ಭಜರಂಗದಳದ ಜಿಲ್ಲಾ ಗೋರಕ್ಷ ದಳದ ಪ್ರಮುಖ ಕಂಠಿ ಕಾರ್ಯಪ್ಪ ವಿರುದ್ಧ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವದು ಖಂಡನೀಯ. ಈ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.