ಸಿದ್ದಾಪುರ, ಸೆ. 6: ಕಾರೊಂದು ಬಾಲಕಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಶಾಲಾ ಬಾಲಕಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಿದ್ದಾಪುರದಲ್ಲಿ ಇಂದು ಸಂಜೆ ನಡೆದಿದೆ. ಸಿದ್ದಾಪುರದ ಅಂಬೇಡ್ಕರ್ ನಗರದ ನಿವಾಸಿ ಲೋಕೇಶ್ ಎಂಬವರ ಪುತ್ರಿ ಪ್ರೀತಿ (7) ಎಂಬಾಕೆ ಮನೆಯ ಸಮೀಪ ರಸ್ತೆ ದಾಟುತ್ತಿರುವ ಸಂದರ್ಭ ಸಿದ್ದಾಪುರದ ನಿವಾಸಿ ಮಣಿ ಮಂಜುನಾಥ್ ಎಂಬವರ ಕಾರು ಡಿಕ್ಕಿಹೊಡೆದ ಪರಿಣಾಮ ಪ್ರೀತಿಯ ತಲೆಗೆ ಗಂಭೀರಗಾಯವಾಗಿದೆ. ಚಿಂತಾಜನಕ ಸ್ಥಿತಿಯಲ್ಲಿ ದ್ದ ಬಾಲಕಿ ಯನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದುಕೊಂಡು ಹೋಗುವ ಸಂದರ್ಭ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾಳೆ. ಮೃತ ಪ್ರೀತಿ ಸಿದ್ದಾಪುರದ ಜಿಎಂಪಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾರು ಚಾಲಕ ಮಂಜುನಾಥ ವಿರುದ್ಧ ಪ್ರಕರಣ ದಾಖಲಾಗಿದೆ.