ಕುಶಾಲನಗರ, ಸೆ.7 : ತಾನು ನಡೆಸುತ್ತಿರುವ ಶಾಲೆ ಆವರಣದ ಕೊಠಡಿಯಲ್ಲಿ ಪುರಾತನ ಕಾಲದ ದೇವಿ ವಿಗ್ರಹ ಇದ್ದು ಅದನ್ನು ಭೂಮಿಯಿಂದ ಮೇಲೆತ್ತಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಶಾಲೆಯ ಮುಖ್ಯಸ್ಥ ಮುಬೀನ್ ತಾಜ್ ಪಟ್ಟಣ ಪಂಚಾಯಿತಿ ಕಚೇರಿಯ ಆವರಣದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕೈಯಲ್ಲಿ ತ್ರಿಶೂಲ ಹಿಡಿದು ಪ.ಪಂ. ಮುಂಭಾಗ ನಿಂತುಕೊಂಡು ಮಹಾಕಾಳಿ ದೇವತೆಗೆ ತನ್ನ ಜಾಗವನ್ನು ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಗೋಚರಿಸಿತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮತ್ತು ಉಪತಹಶೀಲ್ದಾರ್ ನಂದಕುಮಾರ್ ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರೂ ಇದಕ್ಕೆ ಒಪ್ಪದ ಮುಬೀನ್ ತಾಜ್, ತÀನಗೆ ತಕ್ಷಣ ದೇವರ ವಿಗ್ರಹ ಮೇಲೆತ್ತಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.

ಪಂಚಾಯಿತಿ ಮುಖ್ಯಾಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸರು ಮುಬೀನ್ ತಾಜ್ ಅನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದು ಪ್ರಕರಣಕ್ಕೆ ಇತಿಶ್ರೀ ಹಾಡಿದರು.

ತಮ್ಮ ಭೂಮಿಯನ್ನು ಕಬಳಿಸುವ ಹುನ್ನಾರ ಇದಾಗಿದೆ ಎಂದು ಕಟ್ಟಡದ ಮಾಲೀಕ ನಳಿನಿ ಶೇಷಾದ್ರಿ ಮತ್ತು ಪುತ್ರ ಅನಿಲ್‍ಕುಮಾರ್ ಸ್ಪಷ್ಟಪಡಿಸಿ ದ್ದಾರೆ. ತಮ್ಮ ಜಾಗದ ಆವರಣದಲ್ಲಿ ಯಾವದೇ ದೇವರ ವಿಗ್ರಹ ಇರುವದಿಲ್ಲ ಎಂದು ಪ್ರತಿಕ್ರಿಯಿಸಿರುವ ಅವರು, ಮುಬೀನ್ ತಾಜ್ ಎಂಬವರು ಕಳೆದ 7 ವರ್ಷಗಳ ಹಿಂದೆ ತಮಗೆ ಸೇರಿದ ಕಟ್ಟಡದಲ್ಲಿ ಶಾಲೆ ನಡೆಸಲು ಬಾಡಿಗೆಗಿದ್ದು, ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸದಲ್ಲಿ ತೊಡಗಿರುವದು ಬೇಸರ ತಂದಿದೆ ಎಂದಿದ್ದಾರೆ. ಕಳೆದ ಕೆಲವು ಸಮಯದಿಂದ ಮುಬೀನ್ ತಾಜ್ ಅವರು ದೇವರ ವಿಗ್ರಹ ಇರುವದಾಗಿ ತಕರಾರು ಎತ್ತಿರುವ ಸಂಬಂಧ ತಾವುಗಳು ಅಷ್ಟಮಂಗಲ ಪ್ರಶ್ನೆ ಮೂಲಕ ಸತ್ಯಾಸತ್ಯತೆ ಬಗ್ಗೆ ಅರಿಯಲು ಪ್ರಯತ್ನಿಸಿರುವದಾಗಿಯೂ ನಳಿನಿ ಶೇಷಾದ್ರಿ ಅವರು ಹೇಳಿದರು.

1977ರಲ್ಲಿ ತಮ್ಮ ಪತಿ ಸಿಪಿಎಡ್ ಕಾಲೇಜು ತರಗತಿಗಳನ್ನು ನಡೆಸಲು ಜಾಗ ಖರೀದಿಸಿದ್ದು ನಂತರದ ದಿನಗ ಳಲ್ಲಿ ಈ ಆವರಣದ ಕೆಲವು ಕಟ್ಟಡ ಗಳನ್ನು ಬಾಡಿಗೆ ಒಪ್ಪಂದದಲ್ಲಿ ನೀಡಲಾಗಿದೆ ಎಂದು ಮಾಹಿತಿ ಒದಗಿಸಿದರು.

ಕಳೆದ 3 ವರ್ಷಗಳಿಂದ ಒಪ್ಪಂದದಂತೆ ಬಾಡಿಗೆ ನೀಡುತ್ತಿಲ್ಲ. ಪ್ರಸಕ್ತ್ತ ಬಾಡಿಗೆ ಕರಾರು ಮುಗಿದಿದ್ದು ಅವರನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಈ ಸಂಬಂಧ ಪೊಲೀಸ್ ಪುಕಾರು ನೀಡಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.