ಮಡಿಕೇರಿ, ಸೆ. 7 : ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪ ದಸರಾ ಉತ್ಸವಗಳಿಗೆ ಅನುದಾನ ಒದಗಿಸುವಂತೆ ಕೋರಿ ದಸರಾ ಸಮಿತಿ ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಸಲ್ಲಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ನೇತೃತ್ವದಲ್ಲಿ ಸಚಿವ ಜಾರ್ಜ್, ಶಾಸಕ ಕೆ.ಜಿ. ಬೋಪಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಉಸ್ತುವಾರಿ ಸಚಿವರ ಆಪ್ತ ಹರೀಶ್ ಬೋಪಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪದಾಧಿಕಾರಿಗಳಾದ ಚುಮ್ಮಿ ದೇವಯ್ಯ, ಸಂಗೀತ ಪ್ರಸನ್ನ, ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್, ಪದಾಧಿಕಾರಿಗಳಾದ ಸೋಮಣ್ಣ, ಮುರುಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಇನ್ನಿತರರು ಗೃಹ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮಡಿಕೇರಿ ದಸರಾಗೆ ರೂ. 1 ಕೋಟಿ ಹಾಗೂ ಗೋಣಿಕೊಪ್ಪ ದಸರಾಗೆ ರೂ. 50 ಲಕ್ಷ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಪರಿಶೀಲಿಸಿ ಕಳೆದ ಬಾರಿ ನೀಡಿದಷ್ಟು ಅನುದಾನ ನೀಡುವದಾಗಿ ಭರವಸೆಯಿತ್ತಿರುವದಾಗಿ ತಿಳಿದು ಬಂದಿದೆ.