ಕುಶಾಲನಗರ, ಸೆ. 9: ತಮಿಳುನಾಡು ಎಐಡಿಎಂಕೆ ಟಿಟಿವಿ ದಿನಕರನ್ ಬಣ ತನ್ನ ತೆಕ್ಕೆಯಲ್ಲಿದ್ದ ಶಾಸಕರನ್ನು ಜಿಲ್ಲೆಯ ಸುಂಟಿಕೊಪ್ಪ ಬಳಿಯ ರೆಸಾರ್ಟ್ ಒಂದಕ್ಕೆ ಸ್ಥಳಾಂತರಿಸಿದ್ದಾರೆ ಎನ್ನುವ ಸುದ್ದಿ ತಿಳಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಪತ್ರಕರ್ತರು, ಮಾಧ್ಯಮ ಸೇರಿದಂತೆ ಜಿಲ್ಲೆಯ ಗುಪ್ತಚರ ತಂಡಗಳು ಎಲ್ಲೆಂದರಲ್ಲಿ ಹುಡುಕಾಡಿ ಸುಸ್ತಾದ ಘಟನೆ ನಡೆದಿದೆ.ಪಾಂಡಿಚೇರಿಯ ರೆಸಾರ್ಟ್‍ನಲ್ಲಿ 15 ದಿನಗಳಿಂದ ತಂಗಿದ್ದ ಶಾಸಕರಲ್ಲಿ ಓರ್ವ ಶಾಸಕ ಮುಖ್ಯಮಂತ್ರಿ ಪಳನಿಸ್ವಾಮಿ ಬಣದತ್ತ ಮುಖ ಮಾಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ದಿನಕರನ್ ಶಾಸಕರನ್ನು ಕರ್ನಾಟಕದತ್ತ ಕರೆತಂದು ಕೊಡಗಿನಲ್ಲಿ ಇರಿಸಿದ್ದಾರೆ ಎನ್ನುವ ಸುದ್ದಿ ಬಿತ್ತರವಾಗುತ್ತಿದ್ದ ಬೆನ್ನಲ್ಲೇ ಪತ್ರಕರ್ತರು ಕಂಬಿಬಾಣೆ ಸಮೀಪದತೊಂಡೂರು, ಮಡಿಕೇರಿ ರಸ್ತೆಯ ಪ್ರತಿಷ್ಠಿತ ರೆಸಾರ್ಟ್‍ಗಳಲ್ಲಿ ಕಾದು ಸುಸ್ತಾದ ದೃಶ್ಯಗಳು ಗೋಚರಿಸಿದವು. ಇನ್ನೊಂದೆಡೆ ಕೊಡಗು ಜಿಲ್ಲೆಯ ವಿವಿಧ ಗುಪ್ತಚರ ಇಲಾಖೆಯೂ ಸೇರಿದಂತೆ ತಮಿಳುನಾಡಿನ ಪೊಲೀಸರು, ಆ ರಾಜ್ಯದ ಪತ್ರಕರ್ತರ ತಂಡ ಕೂಡ ಶಾಸಕರುಗಳ ನೆಲೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ ದೃಶ್ಯ ಕಂಡುಬಂದವು. -ಸಿಂಚು