ಮಡಿಕೇರಿ, ಸೆ. 12: ಪ್ರತಿನಿತ್ಯ ಪತ್ರಿಕೆ ಓದುವದರಿಂದ ಬರೆಯುವ ಕೌಶಲ್ಯ ವೃದ್ಧಿಯಾಗಲಿದೆ ಎಂದು ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಹೇಳಿದರು. ಕೊಡಗು ಪ್ರೆಸ್‍ಕ್ಲಬ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪತ್ರಿಕೋದ್ಯಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಿರುವ ಸರಣಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮ ಬರಹ ಕೌಶಲ್ಯ ವಿಷಯದ ಕುರಿತು ವಿಷಯ ಮಂಡಿಸಿದರು.

ಆಕರ್ಷಕ ತಲೆ ಬರಹ ನೀಡುವದು ಓದುಗರನ್ನು ಪತ್ರಿಕೆ ಓದುವಂತೆ ಮಾಡುತ್ತದೆ. ವರದಿಗೆ ಅಥವಾ ವಿಷಯಕ್ಕೆ ವ್ಯತಿರಿಕ್ತವಾದ ತಲೆಬರಹದ ನೀಡದಂತೆ ಎಚ್ಚರ ವಹಿಸಬೇಕು. ಓದುಗರಿಗೆ ಗೊಂದಲ ಆಗದಂತೆ, ಸರಳ ಭಾಷೆಯಲ್ಲಿ ಸ್ಪಷ್ಟವಾಗಿ ಬರೆಯಬೇಕು. ತಪ್ಪುಗಳು ನುಸುಳದಂತೆ ಎಚ್ಚರ ವಹಿಸಬೇಕು. ವೈಯುಕ್ತಿಕ ಅಭಿಪ್ರಾಯವನ್ನು ವರದಿಯಲ್ಲಿ ಸೇರಿಸಬಾರದೆಂದರು.

ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದಲ್ಲಿರುವ ವಿವಿಧ ಅವಕಾಶಗಳತ್ತ ಗಮನ ಹರಿಸಬೇಕು. ತಮ್ಮ ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಂಡು ಅಲ್ಲಿ ಉದ್ಯೋಗ ಮಾಡುವಂತಾಗಬೇಕು. ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಂಟಿ ಕಾರ್ಯದರ್ಶಿ ವಿಘ್ನೇಶ್ ಭೂತನಕಾಡು, ಎಫ್‍ಎಂಸಿ ಪತ್ರಿಕೋದ್ಯಮ ವಿಭಾಗ ಉಪನ್ಯಾಸಕ ಇಳೆಯರಾಜ ಇದ್ದರು.