ಮಡಿಕೇರಿ, ಸೆ. 12: ಹೋಂಸ್ಟೇ ಆರಂಭಿಸಲು ಪ್ರವಾಸೋದ್ಯಮ ಇಲಾಖೆಯಡಿ ಆನ್ಲೈನ್ ಮೂಲಕ ಕಡ್ಡಾಯ ನೋಂದಣಿ ಹಾಗೂ ಮಾರ್ಗದರ್ಶನ ಸಂಬಂಧಿಸಿದಂತೆ ಇನ್ನಷ್ಟು ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಸಲಹೆ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹೋಂಸ್ಟೇ ನೋಂದಣಿ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಇನ್ನಷ್ಟು ಮಾಹಿತಿ ನೀಡುವದರ ಜೊತೆಗೆ, ಹೋಂ ಸ್ಟೇ ಪರವಾನಗಿ ಪಡೆಯಲು ಆನ್ಲೈನ್ ಮೂಲಕ ನೋಂದಣಿ, ಹೋಂ ಸ್ಟೇ ನಡೆಸಲು ಬೇಕಿರುವ ಮಾನದಂಡಗಳು ಮತ್ತಿತರ ಸಂಬಂಧ ಅಗತ್ಯ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವಂತೆ ತಿಳಿಸಿದರು.
ಕೆಲವರು ಸ್ಥಳೀಯ ಪಂಚಾಯಿತಿಗಳ ಮೂಲಕ ತೆರಿಗೆ ಪಾವತಿಸಿ ಹೋಂ ಸ್ಟೇ ನಡೆಸುತ್ತಿದ್ದಾರೆ. ಆದರೆ ಆನ್ಲೈನ್ ಮೂಲಕ ನೋಂದಣಿ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇರುವದಿಲ್ಲ. ಆದ್ದರಿಂದ ಈ ಬಗ್ಗೆ ವ್ಯಾಪಕ ಅರಿವು ಮೂಡಿಸುವಂತೆ ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಅನಧಿಕೃತವಾಗಿ ಹೋಂಸ್ಟೇ ನಡೆಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತವೆ. ಆದ್ದರಿಂದ ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಹೋಂಸ್ಟೇ ನೋಂದಣಿ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ರಕ್ಷಣೆ ದೃಷ್ಟಿಯಲ್ಲಿ ಎನ್ಒಸಿ ನೀಡಲಾಗುತ್ತದೆ. ಈ ಸಂದರ್ಭ ಸಿಸಿಟಿವಿ ಅಳವಡಿಸಲಾಗಿದೆಯೇ, ಹೋಂಸ್ಟೇ ನೋಂದಣಿ ಮಾಡಿಸಲಾಗಿದೆಯೇ ಮತ್ತಿತರ ಮಾಹಿತಿಯನ್ನು ಪರಿಶೀಲಿಸಿ ಎನ್ಒಸಿ ನೀಡಲಾಗುತ್ತದೆ. ಸದ್ಯ ಪೊಲೀಸ್ ಇಲಾಖೆಯಿಂದ 150 ಹೋಂಸ್ಟೇಗಳಿಗೆ ಎನ್ಒಸಿ ನೀಡಲಾಗಿದೆ. ಅಲ್ಲದೆ 39 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ.
ಪೊಲೀಸ್ ಇಲಾಖೆ ವತಿಯಿಂದ ಎನ್ಒಸಿ ನೀಡುವ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಅನಗತ್ಯ ತೊಂದರೆ ನೀಡುವದು ಕಂಡುಬಂದರೆ ನೇರವಾಗಿ ಕರೆ ಮಾಡಬಹುದು ಎಂದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್ ಮಾಹಿತಿ ನೀಡಿ ಹೋಂ ಸ್ಟೇ ನೋಂದಣಿ ಸಂಬಂಧಿಸಿದಂತೆ ಆನ್ಲೈನ್ ಮೂಲಕ 651 ಅರ್ಜಿಗಳು ಸಲ್ಲಿಕೆಯಾಗಿದ್ದು, ಹೋಂ ಸ್ಟೇ ನೋಂದಣಿ ಶುಲ್ಕವನ್ನು 295 ಮಂದಿ ಪಾವತಿಸಿದ್ದಾರೆ. ಆನ್ಲೈನ್ ಮೂಲಕ ನೋಂದಣಿ ಮಾಡದ ಹೋಂಸ್ಟೇಗಳು ಅನಧಿಕೃತವಾಗಲಿವೆ. ಆದ್ದರಿಂದ ಆನ್ಲೈನ್ ಮೂಲಕವೇ ನೋಂದಣಿ ಮಾಡಬೇಕಿದೆ. ಉಳಿದಂತೆ ಸ್ಥಳೀಯ ಪಂಚಾಯಿತಿ ಮಟ್ಟದಲ್ಲಿ ತೆರಿಗೆ, ಪೊಲೀಸ್ ಇಲಾಖೆಯಿಂದ ಎನ್ಒಸಿ ಪಡೆಯಬೇಕಿದೆ ಎಂದು ತಿಳಿಸಿದರು.
ಕೊಡಗು ಹೋಂಸ್ಟೇ ಅಸೋಷಿಯೇಷನ್ನ ಮಾಜಿ ಅಧ್ಯಕ್ಷ ಕರುಂಬಯ್ಯ ಅವರು ಕೊಡಗು ಹೋಂಸ್ಟೇ ಅಸೋಸಿಯೇಷನ್ನಡಿ 252 ಹೋಂ ಸ್ಟೇಗಳು ಸದಸ್ಯತ್ವ ಪಡೆದಿದ್ದು, ಈ ಹೋಂ ಸ್ಟೇಗಳು ಸರ್ಕಾರದ ನಿರ್ದೇಶನವನ್ನು ಚಾಚೂ ತಪ್ಪದೇ ಪಾಲಿಸುತ್ತವೆ ಎಂದು ಮಾಹಿತಿ ನೀಡಿದರು.
ಹೋಂಸ್ಟೇ ಅಸೋಸಿಯೇಷನ್ನ ಮೊಂತಿ ಗಣೇಶ್ ಅವರು ಹೋಂ ಸ್ಟೇ ನೋಂದಣಿ ಸಂಬಂಧಿಸಿದಂತೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದರು.
ಉದ್ಯಮಿ ಜಾಹೀರ್ ಅವರು ಅನಧಿಕೃತವಾಗಿ ಹೋಂ ಸ್ಟೇ ನಡೆಸುತ್ತಿರುವವರು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಇದರಿಂದಾಗಿ ಸರ್ಕಾರಿ ನೌಕರರಿಗೂ ವಾಸಕ್ಕೆ ಮನೆ ಸಿಗುತ್ತಿಲ್ಲ. ಮಡಿಕೇರಿ ನಗರ ಸೇರಿದಂತೆ ವಿವಿಧೆಡೆ ಜನ ಜೀವನ ನಿರ್ವಹಣೆ ದುಬಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಅನಧಿಕೃತವಾಗಿ ನಡೆಸುತ್ತಿರುವ ಹೋಂ ಸ್ಟೇಗಳು ಸರ್ಕಾರದ ನಿಯಮವನ್ನು ಪಾಲಿಸುತ್ತಿಲ್ಲ. ಹಾಗೆಯೇ ಟ್ರೇಡ್ ಪರವಾನಗಿಯನ್ನು ಅನಿಯಮಿತವಾಗಿ ಪಡೆಯುತ್ತಿದ್ದಾರೆ ಎಂದು ದೂರಿದರು.
ಅನಧಿಕೃತ ಹೋಂ ಸ್ಟೇಗಳ ನಿಯಂತ್ರಣ ಸಂಬಂಧಿಸಿದಂತೆ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ಆದರೆ ಕಾರ್ಯರೂಪಕ್ಕೆ ಬರದಿರುವದಕ್ಕೆ ಜಿಲ್ಲಾಧಿಕಾರಿ ಅಸಮಾದಾನ ವ್ಯಕ್ತಪಡಿಸಿದರು.
ಪ್ರವಾಸಿ ಟ್ಯಾಕ್ಸಿ ಸಂಬಂಧಿಸಿದಂತೆ ಒಟ್ಟು 30 ಅರ್ಜಿಗಳು ಬಂದಿದೆ. ಇದರಲ್ಲಿ 17 ಅಭ್ಯರ್ಥಿಗಳು ಅರ್ಹರಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಪ್ರಗತಿ ಸಂಬಂಧಿಸಿದಂತೆ ಕೊಡವ ಹೆರಿಟೇಜ್ ಕೇಂದ್ರ ನಿರ್ಮಾಣ, ಮಲ್ಲಳ್ಳಿ ಜಲಪಾತ ಬಳಿ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ, ಅಬ್ಬಿ ಜಲಪಾತ ಪ್ರದೇಶದಲ್ಲಿ ಪ್ಲಾಟ್ ಫಾರಂ, ರೈಲಿಂಗ್ಸ್, ಪಾಥ್ ವೇ ಮೆಟ್ಟಿಲು ದುರಸ್ತಿ ಮತ್ತಿತರ ಅಭಿವೃದ್ಧಿ ಕಾಮಗಾರಿಗಳು, ಚೆನ್ನರಾಯಪಟ್ಟಣದಿಂದ ದುಬಾರೆವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ, ದುಬಾರೆಯ ಕಾವೇರಿ ನದಿ ಭಾಗದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು.
ಚೇಂಬರ್ ಆಫ್ ಕಾಮರ್ಸ್ನ ಜಿಲ್ಲಾ ಅಧ್ಯಕ ಬಿ.ಎನ್. ಪ್ರಕಾಶ್, ಕೊಡಗು ಹೋಂಸ್ಟೇ ಅಸೋಸಿಯೇಷನ್ನ ವಿಜು ಚಂಗಪ್ಪ, ಹೋಂ ಸ್ಟೇ ಅಸೋಸಿಯೇಷನ್ನ ನವೀನ್ ಅಂಬೆಕಲ್, ನಿರ್ದೇಶಕ ಕೇಶವ ಕಾಮತ್, ಪೌರಾಯುಕ್ತೆ ಬಿ. ಶುಭಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ಜಯ, ತಾ.ಪಂ.ಇಒ ಜೀವನ್ ಕುಮಾರ್, ಹೋಟೆಲ್ ಅಸೋಸಿಯೇಷನ್ ಭಾಸ್ಕರ್, ದುಬಾರೆ ರಿವರ್ ರ್ಯಾಫ್ಟಿಂಗ್ ರತೀಶ್, ಸದಸ್ಯರು, ನಾನಾ ಇಲಾಖೆ ಅಧಿಕಾರಿಗಳು ಹಾಗೂ ಇತರರು ಇದ್ದರು.