ಚೆಟ್ಟಳ್ಳಿ, ಸೆ. 18: ಇಲ್ಲಿಗೆ ಸಮೀಪದ ನಲ್ಲೂರು ಭೂತನ ಕಾಡು ಟಾಟಾ ಸಂಸ್ಥೆಯ ತೋಟದಲ್ಲಿ ಐದು ವರ್ಷ ಪ್ರಾಯದ ಎತ್ತನ್ನು ಮಾಂಸಕ್ಕಾಗಿ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ 3.45 ಗಂಟೆಗೆ ಬೇಟೆಗಾರರು ಮಾಂಸಕ್ಕಾಗಿ ಎತ್ತನ್ನು ಕಾಫಿ ತೋಟದ ಒಳಗೆ ಬೇಟೆಯಾಡಿ ಗುಂಡಿಕ್ಕಿ ಕೊಂದಿದ್ದಾರೆ. ಟಾಟಾ ಕಾಫಿ ತೋಟದ ವ್ಯವಸ್ಥಾಪಕ ಮಂದಣ್ಣ ಅವರಿಗೆ ದೊರೆತ ಮಾಹಿತಿಯ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ತಿಳಿಸಿದ್ದು, ಠಾಣಾಧಿಕಾರಿ ಜಯರಾಂ, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಘಟನೆ ನಡೆದ ಸ್ಥಳವು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದು (ವ್ಯಾಪ್ತಿಗೆ) ಬರುವದರಿಂದ ಪ್ರಕರಣವನ್ನು ವರ್ಗಾಯಿಸಿದ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಬೋಜಪ್ಪ ಹಾಗೂ ಸಹಾಯಕ ಠಾಣಾಧಿಕಾರಿ ಆಲೆಕ್ಸ್ ರಾಜ, ಚೆಟ್ಟಳ್ಳಿ ಗ್ರಾಮ ಪೇದೆ ಪ್ರಕಾಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿದರು.

ಈ ಬಗ್ಗೆ ಪ್ರಕರಣ ದಾಖಲಿಸಿ, ಚೆಟ್ಟಳ್ಳಿ ಪಶುವೈದ್ಯಾಧಿಕಾರಿ ಡಾ. ಶಿಂಧೆ ಮರಣೋತ್ತರ ಪರೀಕ್ಷೆ ನಡೆಸಿದರು. ಹೊಟ್ಟೆಯ ಭಾಗದಲ್ಲಿ ಗುಂಡು ಪತ್ತೆಯಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳು ವದಾಗಿ ಠಾಣಾಧಿಕಾರಿ ತಿಳಿಸಿದರು.

-ಕರುಣ್ ಕಾಳಯ್ಯ