ಮಡಿಕೇರಿ, ಸೆ. 19: ಮಡಿಕೇರಿ ದಸರಾ ಉತ್ಸವದಲ್ಲಿ ಕಳೆದ 54 ವರ್ಷಗಳಿಂದ ಭಾಗವಹಿಸುತ್ತಾ ಬಂದಿರುವ ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 55ನೇ ವರ್ಷದ ಉತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಜೆ. ಅಂಕುಷ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ಲಲಿತಾಂಬಿಕೆಯಿಂದ ಭಂಡಾಸುರನ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದ್ದು, ದಿಂಡಿಗಲ್‍ನ ತಂಗಂ ಲೈಟಿಂಗ್ಸ್‍ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಬೆಂಗಳೂರಿನ ವಲ್ರ್ಡ್ ಆಫ್ ಸೌಂಡ್ಸ್‍ನವರು ಧ್ವನಿವರ್ಧಕ ವ್ಯವಸ್ಥೆ ಮಾಡಲಿದ್ದು, ಚೆನ್ನೈನ ಸಿನಿ ವಲ್ರ್ಡ್ ಸಂಸ್ಥೆ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದೆ. ಒಟ್ಟು 18 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಉದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಪ್ಲಾಟ್‍ಫಾರಂನ್ನು ಮಡಿಕೇರಿಯ ಜನ್ನು ಮತ್ತು ತಂಡ ನಿರ್ಮಿಸಲಿದ್ದು, ಕಲಾಕೃತಿಗಳಿಗೆ ಚಲನ ವಲನವನ್ನು ಜಯರಾಂ ಆಚಾರ್ಯ, ಲಕ್ಷ್ಮಣಾಚಾರ್ಯ ಹಾಗೂ ಹರೀಶ್ ಭೀಮಯ್ಯ ತಂಡದವರು ನೀಡಲಿದ್ದಾರೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ರಾಕಿ ಮತ್ತು ಬಳಗದವರು ಮಾಡಲಿದ್ದಾರೆ ಎಂದು ಅಂಕುಷ್ ವಿವರಿಸಿದರು.

ಒಟ್ಟು 14 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರ ಲಾಗುತ್ತಿದ್ದು, ಪ್ಲೈಯಿಂಗ್ ಕಲರ್ಡ್ ಫೈರ್ ಮಂಟಪದಲ್ಲಿ ಕಂಗೊಳಿಸಲಿದೆ. ಸ್ಟಾರ್ ಆಫ್ ಮಂಗಳೂರು ತಂಡ ಮಂಟಪವನ್ನು ಮುನ್ನಡೆಸಲಿದ್ದು, ಇದೇ ಮೊದಲ ಬಾರಿಗೆ ಡಿಜಿಟಲ್ ಜಿಯಾ ಹೆಡ್ ಫೈರ್ ಮೆಷಿನ್ ತಂತ್ರಜ್ಞಾನವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಅಂಕುಷ್ ಮಾಹಿತಿಯಿತ್ತರು.

- ಉಜ್ವಲ್‍ರಂಜಿತ್