ಮೂರ್ನಾಡು, ಸೆ. 20 : ಎಟಿಂಎಂ ಬೀಗ ಮುರಿದು ಹಣ ದೋಚಲು ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಇಲ್ಲಿನ ಪಟ್ಟಣದಲ್ಲಿ ನಡೆದಿದೆ.ಪಟ್ಟಣದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಎಟಿಎಂನ ಶಟರ್ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಕಳ್ಳರು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಎಟಿಎಂನ ಹೊರ ಭಾಗದಲ್ಲಿರುವ ಸಿಸಿ ಕ್ಯಾಮರವನ್ನು ಮುಚ್ಚಿ ಬಳಿಕ ಶಟರ್ ಬೀಗ ಮುರಿದು ಒಳಗೆ ಪ್ರವೇಶಿಸಿ ಒಳಭಾಗದಲ್ಲಿರುವ ಸಿಸಿ ಕ್ಯಾಮರವನ್ನು ಪೇಪರ್ ಇಟ್ಟು ಪ್ಲಾಸ್ಟರ್‍ನಿಂದ ಮುಚ್ಚಿದ್ದಾರೆ. ಎಟಿಎಂ ಮಿಷನ್ ಮುಂಭಾಗವನ್ನು ಜಖಂಗೊಳಿಸಿ ಹಣ ದೋಚಲಾಗದೆ ಬಿಟ್ಟು ತೆರಳಿದ್ದಾರೆ. ರಾತ್ರಿ ಸುಮಾರು 11.30 ಗಂಟೆಗೆ ಆಗಮಿಸಿದ ಕಳ್ಳರು ಮುಖಕ್ಕೆ ಸಂಪೂರ್ಣ ಬಟ್ಟೆಯಿಂದ ಮುಚ್ಚಿಕೊಂಡು ಕೃತ್ಯ ಎಸಗಿದ್ದಾರೆ.

ಸ್ಥಳಕ್ಕೆ ಡಿವೈಎಸ್‍ಪಿ ಸುಂದರ್ ರಾಜ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪ್ರದೀಪ್, ಪ್ರಭಾರ ಉಪನಿರೀಕ್ಷಕ ಬೋಜಪ್ಪ, ಬೆರಳಚ್ಚು ತಜ್ಞರು, ಶ್ವಾನ ದಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.