ಮಡಿಕೇರಿ, ಸೆ.20: ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಿಜಯದಶಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವದರಿಂದ 2017 ನೇ ಸಾಲಿನ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಶಾಲೆಗಳಿಗೆ ಈಗಾಗಲೇ ನೀಡಿರುವ ಮಧ್ಯಂತರ ರಜೆಯನ್ನು ಮಾರ್ಪಾಡಿಸಿ, ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಗಳಿಗೆ ಸಂಬಂಧಿಸಿದಂತೆ ದಸರಾ ಹಬ್ಬದ ಪ್ರಯುಕ್ತ ಶಾಲೆಗಳಿಗೆ ಮಧ್ಯಂತರ ರಜೆಯನ್ನು ತಾ. 21ರಿಂದ (ಇಂದಿನಿಂದ) ಅಕ್ಟೋಬರ್ 5 ರವರೆಗೆ ನಿಗದಿಪಡಿಸಿ ಆದೇಶಿಸಿದೆ. ಅಕ್ಟೋಬರ್ 6 ರಿಂದ ಶಾಲೆಗಳು ಎಂದಿನಂತೆ ಪುನರಾರಂಭಿಸಲಾಗುವದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಅದೇ ರೀತಿ ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 5 ರವರೆಗೆ ಮಧ್ಯಂತರ ರಜೆಯನ್ನು ಪರಿಷ್ಕರಿಸಿ ಆದೇಶಿಸಲಾಗಿದೆ. ದಕ್ಷಿಣಕನ್ನಡ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ರಜೆಯ ನಂತರ ಅಕ್ಟೋಬರ್ 6 ರಿಂದ ಎಂದಿನಂತೆ ಪದವಿ ಪೂರ್ವ ಕಾಲೇಜುಗಳು ಪುನರಾರಂಭವಾಗಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.