ಸೋಮವಾರಪೇಟೆ,ಸೆ.21: ನವರಾತ್ರಿ ಅಂಗವಾಗಿ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ 9 ದಿನಗಳ ಕಾಲ ಆಯೋಜನೆಗೊಂಡಿರುವ ಶರನ್ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.ದೇವಾಲಯದ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಮುಂದಿನ ಒಂಬತ್ತು ದಿನಗಳು ನಡೆಯಲಿರುವ ಶರನ್ನವರಾತ್ರಿ ಉತ್ಸವದಲ್ಲಿ ಪ್ರತಿನಿತ್ಯ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜೆ, ಹೋಮ ನಡೆಯಲಿದೆ. ಇಂದು ಬೆಳಗ್ಗೆ ಆನೆಕೆರೆಯಿಂದ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಗಂಗೆ ಪೂಜೆಯ ನಂತರ ಮಂಗಳ ವಾದ್ಯಘೋಷ ಗಳೊಂದಿಗೆ ದೇವಾಲಯಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. (ಮೊದಲ ಪುಟದಿಂದ) ದೇವಾಲಯದ ಅರ್ಚಕರಾದ ಪ್ರಸನ್ನ ಭಟ್‍ರವರ ಪೌರೋಹಿತ್ವದಲ್ಲಿ ಬೆಳಗ್ಗಿನಿಂದಲೇ ಶಕ್ತಿ ಪಾರ್ವತಿ ದೇವಿಗೆ ವಿಶೇಷ ಪೂಜೆ, ಅರ್ಚನೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರೆವೇರಿತು.

ಸಂಜೆ ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ರಂಗ ಪೂಜೆ, ಆವರಣ ಸೇವೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನೆರವೇರಿತು.