ಮಡಿಕೇರಿ, ಸೆ. 22: ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಮತ್ತು ಯುವ ಜನತೆಯನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸುವದಕ್ಕಾಗಿ ಮಡಿಕೇರಿ ಮಾಜಿ ಸೈನಿಕರ ಸಂಘವನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ತಾ. 24 ರಂದು ಸೌಹಾರ್ದ ಕೂಟವನ್ನು ಆಯೋಜಿಸಿರುವದಾಗಿ ಸಂಘದ ಅಧ್ಯಕ್ಷ ಕೆ.ಎ. ಆನಂದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011ರಲ್ಲಿ ಸ್ಥಾಪನೆಯಾದ ಮಡಿಕೇರಿ ನಗರದ ಸಂಘ ಸುಮಾರು 150 ಮಂದಿ ಸದಸ್ಯರನ್ನು ಹೊಂದಿದ್ದು, ಸದಸ್ಯತ್ವ ಅಭಿಯಾನದ ಮೂಲಕ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಾಗುವದೆಂದರು. ನಿವೃತ್ತಿ ಹೊಂದಿದ ಸೈನಿಕರನ್ನು ಒಗ್ಗೂಡಿಸಿ ಶ್ರೇಯೋಭಿವೃದ್ಧಿಗಾಗಿ ಚಿಂತನೆ ನಡೆಸಲು ಪ್ರತಿವರ್ಷ ನಡೆಸುವ ಸೌಹಾರ್ದ ಕೂಟ ಸಹಕಾರಿಯಾಗಿದೆ.

ತಾ. 24 ರಂದು ನಗರದ ಕಾವೇರಿ ಮಿನಿ ಹಾಲ್‍ನಲ್ಲಿ ನಡೆಯುವ ಸೌಹಾರ್ದ ಕೂಟದಲ್ಲಿ ವಿಶೇಷ ಅತಿಥಿಗಳಾಗಿ ಸೈನಿಕ ಪುನರ್ವಸತಿ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಲೆ. ಕ. ಗೀತಾ ಎಂ. ಶೆಟ್ಟಿ ಹಾಗೂ ವಿಶೇಷ ಆಹ್ವಾನಿತರಾಗಿ ಹೋಂ ಗಾರ್ಡ್ ಕಮಾಂಡೆಂಟ್ ಮೇ. ಎಸ್. ಚಿಂಗಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.

ಮಾಜಿ ಸೈನಿಕರು ಸಭೆಯಲ್ಲಿ ಪಾಲ್ಗೊಂಡು ಸದಸ್ಯತ್ವವನ್ನು ಪಡೆಯುವ ಮೂಲಕ ಸಂಘದ ಬಲವರ್ಧನೆಗೆ ಕೈಜೋಡಿಸಬೇಕೆಂದು ಸಲಹೆ ಮಾಡಿದರು. ಸಂಘ ಮುಂದಿನ ದಿನಗಳಲ್ಲಿ ಮಾಜಿ ಸೈನಿಕರ ಕುಂದುಕೊರತೆಗಳ ಕುರಿತು ಸಮಾಲೋಚನೆ ಮತ್ತು ಪರಿಹಾರದ ಬಗ್ಗೆ ಚಿಂತನೆ ನಡೆಸುವದು, ಜಿಲ್ಲೆಯ ಯುವ ಜನತೆಯನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸುವದು ಮತ್ತು ಸೇರಲಿಚ್ಛಿಸುವ ಯುವಕರಿಗೆ ಉಚಿತ ತರಬೇತಿ ನೀಡುವದು, ಪರಿಸರ ಸಂರಕ್ಷಣೆಗೆ ಪರಿಸರ ಕಾಳಜಿ ತೋರುವದು ಮತ್ತು ಕಾರ್ಗಿಲ್ ವಿಜಯೋತ್ಸವ ಸೇರಿದಂತೆ ಸೇನಾ ದಿನಗಳಲ್ಲಿ (ಆರ್ಮಿ ಡೇ) ಸಕ್ರಿಯವಾಗಿ ಪಾಲ್ಗೊಳ್ಳುವದು ಸಂಘದ ಉದ್ದೇಶವಾಗಿದೆ ಎಂದು ಕೆ.ಎ. ಆನಂದ ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಸಿ. ಗಣಪತಿ, ಕಾರ್ಯದರ್ಶಿ ಎಂ.ಪಿ. ಕಾವೇರಿಯಪ್ಪ, ನಿರ್ದೇಶಕರುಗಳಾದ ಕೆ.ಪಿ. ಮುತ್ತಣ್ಣ, ಹೆಚ್.ಪಿ. ಚಂದ್ರು ಹಾಗೂ ಕೆ.ಪಿ. ಮ್ಯಾಥ್ಯು ಉಪಸ್ಥಿತರಿದ್ದರು.