ಮೂರ್ನಾಡು: ಮೂರ್ನಾಡು ಹಿಂದೂ ಮಲಯಾಳಿ ಸಂಘದ ವತಿಯಿಂದ 9ನೇ ವರ್ಷದ ಓಣಂ ಹಬ್ಬದ ಕಾರ್ಯಕ್ರಮ ತಾ. 24 ರಂದು (ಇಂದು) ನಡೆಯಲಿದೆ.

ಇಲ್ಲಿನ ಗೌಡ ಸಮಾಜದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಹೂವಿನ ರಂಗೋಲಿ ಸ್ಪರ್ಧೆ, 9.30 ಗಂಟೆಗೆ ಮಹಾಬಲಿ, ತೆಯ್ಯಂ ಹಾಗೂ ಸಿಂಗಾರಿ ಮೇಳದೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಹಬ್ಬದ ಮೆರವಣಿಗೆ ನಡೆಯಲಿದೆ.

ಬಳಿಕ 11.30 ಗಂಟೆಗೆ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ವಿಧಾನ ಸಭಾ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್, ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಈ.ಸಿ. ಜೀವನ್, ಕರ್ನಾಟಕ ಸ್ಟೇಟ್ ಮಾರ್ಕೇಟಿಂಗ್ ಫೆಡರೇಶನ್ ನಿರ್ದೇಶಕ ಬೆಲ್ಲು ಸೋಮಯ್ಯ, ಕಾಂಗ್ರೆಸ್ ವಲಯ ಸಮಿತಿ ಅಧ್ಯಕ್ಷ ಮುಂಡಂಡ ಕೆ. ಭಾಗೇಶ್, ಮೂರ್ನಾಡು ಗೌಡ ಸಮಾಜ ಅಧ್ಯಕ್ಷ ಚೆಟ್ಟಿಮಾಡ ಸಿ. ಕಾರ್ಯಪ್ಪ, ಕೊಡವ ಸಮಾಜ ಅಧ್ಯಕ್ಷ ಪಳಂಗಂಡ ಯು. ಗಣೇಶ್ ಆಗಮಿಸಲಿದ್ದಾರೆ. ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.

ಐಗೂರು: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್‍ಎನ್‍ಡಿಪಿ) ಘಟಕದಿಂದ ಅಕ್ಟೋಬರ್ 1 ರಂದು ಅದ್ಧೂರಿ ಓಣಂ ಅಚರಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ಘಟಕದ ಅಧ್ಯಕ್ಷ ಟಿ.ಕೆ. ಭಾಸ್ಕರ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮೂರನೇ ವರ್ಷದ ಓಣಂ ಆಚರಣೆಯನ್ನು ಕಾಜೂರು ಗ್ರಾಮದ ಹರಿಹರ ಯುವಕ ಸಂಘದ ಆವರಣದಲ್ಲಿ ನಡೆಸಲಾಗುವದು. ಅಂದು ಬೆಳಿಗ್ಗೆ 7 ಗಂಟೆಗೆ ಸಂಘದ ಆವರಣದಲ್ಲಿ ಪೂಕಳಂ ಸ್ಪರ್ಧೆ ನಡೆಯಲಿದೆ. ಗ್ರಾ.ಪಂ. ಮಾಜಿ ಅಧ್ಯಕ್ಷೆ ಪಾಂಚಾಲಿ ಮೋಹನ್ ಚಾಲನೆ ನೀಡಲಿದ್ದಾರೆ. ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮುದಾಯ ಬಾಂಧವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.

ಬೆಳಿಗ್ಗೆ 9 ಗಂಟೆಗೆ ಐಗೂರು ಮುತ್ತಪ್ಪಸ್ವಾಮಿ ದೇವಾಲಯದಿಂದ ಚಂಡೆ ಮೇಳ ಹಾಗೂ ನಾರಾಯಣ ಗುರುಗಳ ರಥದೊಂದಿಗೆ ಮೆರವಣಿಗೆ ನಡೆಯಲಿದ್ದು, ಸಂಘದ ನಿರ್ದೇಶಕ ಗೋಪಾಲಕೃಷ್ಣ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ಜಿಲ್ಲಾ ಘಟಕದ ಕೆ.ಎನ್. ವಾಸು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯನ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಸಬಿತ ಚನ್ನಕೇಶವ, ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್, ಗ್ರಾ.ಪಂ. ಅಧ್ಯಕ್ಷ ಡಿ.ಎಸ್. ಚಂಗಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಜಿ.ಕೆ. ಬಾಲಕೃಷ್ಣ, ಕರಿಕೆ ಶಿಕ್ಷಕ ಕೆ.ಎನ್. ಸತೀಶ್ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವದು ಎಂದರು. ಕಾಜೂರು ಶಾಖೆ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು. ಮಧ್ಯಾಹ್ನ ಓಣಂ ಸದ್ಯದ ನಂತರ 2 ಗಂಟೆಗೆ ಸಮುದಾಯ ಬಾಂಧವರಿಗೆ ವಿವಿಧ ಕ್ರೀಡಾಕೂಟ, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಾಜೂರು ಘಟಕದ ಉಪಾಧ್ಯಕ್ಷ ಜಿ.ಆರ್. ಶಶಿ, ಕಾರ್ಯದರ್ಶಿ ಎಂ.ಕೆ. ಮೋಹನ್, ನಿರ್ದೇಶಕರುಗಳಾದ ಕೆ.ಎಂ. ಗೋಪಾಲಕೃಷ್ಣ, ಟಿ.ಆರ್. ವಿಜಯ, ಸದಸ್ಯ ಪಿ.ಜಿ. ರಾಧಾಕೃಷ್ಣ ಅವರುಗಳು ಉಪಸ್ಥಿತರಿದ್ದರು.

ಸೋಮವಾರಪೇಟೆ: ತಾಲೂಕು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಅಕ್ಟೋಬರ್ 8 ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಎರಡನೇ ವರ್ಷದ ಓಣಂ ಉತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ವಿ.ಎಂ. ವಿಜಯ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ಸಮಾಜ ಬಾಂಧವರಿಗೆ ಪೂಕಳಂ ಸ್ಪರ್ಧೆ, ಶಾಲಾ ಮಕ್ಕಳಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸದಸ್ಯರ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 7 ಗಂಟೆಯಿಂದ 9 ರವರೆಗೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಪೂಕಳಂ ಸ್ಪರ್ಧೆ ನಡೆಯಲಿದ್ದು, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಬಾಲಕೃಷ್ಣ ಚಾಲನೆ ನೀಡಲಿದ್ದಾರೆ. 9 ಗಂಟೆಗೆ ಇಲ್ಲಿನ ಕಕ್ಕೆಹೊಳೆ ಬಳಿಯ ಮುತ್ತಪ್ಪ ದೇವಸ್ಥಾನದಿಂದ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಿಂಗಾರಿ ಮೇಳದೊಂದಿಗೆ ಓಣಂಘೋಷ ಯಾತ್ರೆ ನಡೆಯಲಿದ್ದು, ಮಾಜಿ ಸಚಿವ ಬಿ.ಎ. ಜೀವಿಜಯ ಚಾಲನೆ ನೀಡಲಿದ್ದಾರೆ ಎಂದರು.

ಮಧ್ಯಾಹ್ನ 12 ಗಂಟೆಗೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್ ಮತ್ತು ಉತ್ಸವ ಸಮಿತಿ ಅಧ್ಯಕ್ಷ ವಿ.ಎಂ. ವಿಜಯ ವಹಿಸಲಿದ್ದಾರೆ. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವ ಬಿ.ಎ. ಜೀವಿಜಯ, ಹಿರಿಯ ವಕೀಲ ಚಂದ್ರಮೌಳಿ, ಗೌಡಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಭರತ್ ಕುಮಾರ್, ಸಲಹೆಗಾರ ವಿ.ಕೆ. ಲೋಕೇಶ್ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಓಣಂ ಸದ್ಯ ಆಯೋಜಿಸಲಾಗಿದೆ. 3 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. 1 ರಿಂದ 3ನೇ ತರಗತಿ, 4 ರಿಂದ 7ನೇ ತರಗತಿ, ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ನೃತ್ಯ ಸ್ಪರ್ಧೆ ನಡೆಯಲಿದೆ. ಭಾಗವಹಿಸುವ ತಂಡಗಳು ತಾ. 30 ರೊಳಗೆ ತಮ್ಮ ಹೆಸರನ್ನು ಮೊ: 9035935929, 9480444828 ನಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಮಾಜದ ಅಭಿವೃದ್ಧಿಯಲ್ಲಿ ಜನಾಂಗ ಬಾಂಧವರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎರಡನೇ ವರ್ಷದ ಓಣಂ ಆಚರಣೆಯಲ್ಲಿ ಹಿಂದೂ ಮಲಯಾಳಿ ಸಮಾಜದ ಪ್ರಮುಖರು, ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಇನ್ನಷ್ಟು ಪ್ರೋತ್ಸಾಹಿಸಬೇಕೆಂದು ಗೋಷ್ಠಿಯಲ್ಲಿದ್ದ ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್ ಮನವಿ ಮಾಡಿದರು.

ಗೋಷ್ಠಿಯಲ್ಲಿ ತಾಲೂಕು ಹಿಂದೂ ಮಲಯಾಳಿ ಸಮಾಜದ ಕಾರ್ಯದರ್ಶಿ ಅಯ್ಯಪ್ಪ, ಸಹ ಕಾರ್ಯದರ್ಶಿ ರತ್ನಾಕರ, ಸಲಹೆಗಾರ ಉದಯಕುಮಾರ್, ಪದಾಧಿಕಾರಿಗಳಾದ ರಾಜನ್, ಅಜೀಶ್, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಉಪಸ್ಥಿತರಿದ್ದರು.

ಚೆಟ್ಟಳ್ಳಿ: ಹಿಂದೂ ಮಲಯಾಳಿ ಸಮಾಜಂ ವತಿಯಿಂದ ಅ. 1 ರಂದು ಚೆಟ್ಟಳ್ಳಿಯಲ್ಲಿ ಓಣಂ ಆಚರಿಸಲಾಗುತ್ತಿದೆ. ಪೂರ್ವಾಹ್ನ 7 ಗಂಟೆಯಿಂದ 9 ರವರೆಗೆ ಪೂಕಳಂ ಸ್ಪರ್ಧೆ 10 ಗಂಟೆಗೆ ಸಮಾರಂಭದ ಉದ್ಘಾಟನೆ, ಮುಖ್ಯ ಅತಿಥಿಗಳಾಗಿ ನಿವೃತ್ತ ಸ್ಪೈಸಸ್ ಬೋರ್ಡ್‍ನ ಉಪ ನಿರ್ದೇಶಕ ಎ.ಸಿ. ಗಿರೀಶ್ ಕುಮರ್, ನಿವೃತ್ತ ಶಿಕ್ಷಕಿ ಅಯ್ಯಂಡ್ರ ಲೀಲಾ ಸುಬ್ರಾಯ, ಕೂಡ್ಲೂರು-ಚೆಟ್ಟಳ್ಳಿಯ ಕಾಫಿ ಬೆಳೆಗಾರ ಕೆ.ಎಸ್. ಸುರೇಶ್ ಕುಮರ್, ಚೆಟ್ಟಳ್ಳಿಯ ಕಾಫಿ ಬೆಳೆಗಾರ ಆಶಿಕ್ ಚಿಟ್ಟಿಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಪೂವಾಹ್ನ 10.30ಕ್ಕೆ ಶಭರೀಶ ಹಾಗೂ ಕಂಡಕರೆ ತಂಡದ ವಾದ್ಯದೊಂದಿಗೆ ಮಂಗಳ ಸಭಾಂಗಣದಿಂದ ಚೆಟ್ಟಳ್ಳಿ ಪಟ್ಟಣದವರೆಗೆ ಶೋಭಾಯಾತ್ರೆ ತೆರಳಿ ನಂತರ ಕ್ರೀಡಾಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಓಣಂ ವಿಶೇಷ ಭೋಜನ 2.30 ರಿಂದ ವೇದಿಕೆಯಲ್ಲಿ ಇರಿಟಿಯ ಶ್ರೀ ಮೂಕಾಂಬಿಕ ನಾಟ್ಯಾಲಯದ ಕಲಾವಿದರಿಂದ ಹಾಗೂ ಸ್ಥಳೀಯ ಕಲಾವಿದರಿಂದ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಸಂಜೆ ಚೆಟ್ಟಳ್ಳಿ ಹಿಂದೂ ಮಲೆಯಾಳಿ ಸಮಾಜಂನ ಅಧ್ಯಕ್ಷ ಪಿ.ಕೆ. ಶಶಿಕುಮರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ವಾಲ್ಲೂರು-ತ್ಯಾಗತೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ. ವತ್ಸಲ ಶ್ರೀಧರನ್, ಚೆಟ್ಟಳ್ಳಿ ಹಿಂದೂ ಮಲೆಯಾಳಿ ಸಮಾಜಂನ ಗೌರವಧ್ಯಕ್ಷ ವಿ.ಕೆ. ವಿನು, ಓಣಂ ಆಚರಣಾ ಸಮಿತಿ ಅಧ್ಯಕ್ಷ ಓ.ಕೆ. ಶ್ರೀನಿವಾಸನ್ ಹಾಗೂ ಕೊಡಗು ಜಿಲ್ಲೆಯ ಇತರ ಹಿಂದೂ ಮಲೆಯಾಳಿ ಸಮಾಜಂನ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವದೆಂದು ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.