ಮಡಿಕೇರಿ, ಸೆ. 23: ಮಡಿಕೇರಿ ನಗರದ ಕಾಲೇಜು ರಸ್ತೆಯಿಂದ ಹಾಡಹಗಲೇ ಸ್ಕೂಟರ್ ಅಪಹರಿಸಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಣಿಪೇಟೆ ಅಂಬೇಡ್ಕರ್ ಬಡಾವಣೆಯ ಕಿಶೋರ್ ಎಂಬವರಿಗೆ ಸೇರಿದ ಒಂದು ತಿಂಗಳ ಹಿಂದೆಯಷ್ಟೆ ನೋಂದಣಿಯಾಗಿದ್ದ ಹೊಸ ಹೀರೊ ಮ್ಯಾಸ್ಟರ್ ಎಡ್ಜ್ ಸ್ಕೂಟರ್ (ಕೆಎ12 ಆರ್ 5031) ಅನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿರುವದು ಸಿ.ಸಿ. ಟಿವಿ ಫೂಟೇಜ್ ಆಧಾರದಲ್ಲಿ ತಿಳಿದು ಬಂದಿದೆ.

ಕಾಲೇಜು ರಸ್ತೆಯ ಡಿ.ಸಿ.ಸಿ. ಬ್ಯಾಂಕ್ ಸನಿಹದ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ಸ್ಕೂಟರ್ ಅನ್ನು ಎರಡು ದಿನದಿಂದೆ ಬೆಳಿಗ್ಗೆ 9.45ರ ವೇಳೆಗೆ ಕಿಶೋರ್ ನಿಲ್ಲಿಸಿ ಕೆಲಸಕ್ಕೆಂದು ತೆರಳಿದ್ದರು. 11 ಗಂಟೆ ಸುಮಾರಿಗೆ ಅವರು ಬಂದಾಗ ಸ್ಕೂಟರ್ ನಾಪತ್ತೆಯಾಗಿದೆ. ಸ್ನೇಹಿತರಾದರೂ ತಮಾಷೆಗೆಂದು ಬೇರೆಡೆ ನಿಲ್ಲಿಸಿರಬಹುದೆಂದು ಅವರು ಅಲ್ಲಲ್ಲಿ ಹುಡುಕಾಡಿದರೂ ಪ್ರಯೋಜನ ವಾಗಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

ಈ ರಸ್ತೆ ವ್ಯಾಪ್ತಿಯಲ್ಲಿನ ಸಿ.ಸಿ. ಟಿ.ವಿ. ಫೂಟೇಜ್‍ಗಳನ್ನು ಪರಿಶೀಲಿಸಿದ ಸಂದರ್ಭ ಉತ್ತರ ಭಾರತಕ್ಕೆ ಸೇರಿದ ವ್ಯಕ್ತಿಯಂತಿರುವ ಯುವಕನೋರ್ವ ನಿಲ್ಲಿಸಿದ್ದ ಸ್ಥಳದಿಂದ ಸ್ಕೂಟರ್‍ನಲ್ಲಿ ವೇಗವಾಗಿ ಪೇಟೆ ರಾಮಮಂದಿರದಿಂದ ಹಿಲ್ ರಸ್ತೆಯತ್ತ ವೇಗವಾಗಿ ತೆರಳುವದು ಗೋಚರಿಸಿದೆ. ರಾಮಮಂದಿರದ ಬಳಿ ಮತ್ತೊಬ್ಬ ವ್ಯಕ್ತಿಯನ್ನು ಹತ್ತಿಸಿಕೊಂಡಿರುವದು ಮತ್ತೊಂದು ಸಿ.ಸಿ. ಟಿವಿಯಿಂದ ಪತ್ತೆಯಾಗಿದೆ. ಈ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಸ್ಥಳೀಯ ವ್ಯಕ್ತಿಗಳಲ್ಲಿನ ಹಿನ್ನೆಲೆಯಲ್ಲಿ ಆರೋಪಿಗಳ ಗುರುತು ಸುಲಭವಾಗಿ ಪತ್ತೆಯಾಗುತ್ತಿಲ್ಲ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.