*ಗೋಣಿಕೊಪ್ಪಲು, ಸೆ. 26 : ಇಲ್ಲಿನ ಮುಖ್ಯ ರಸ್ತೆ ಬದಿಯಲ್ಲಿರುವ ಆದರ್ಶ ಜ್ಯುವೆಲ್ಲರಿ ಮಳಿಗೆಗೆ ಕಳ್ಳರು ನುಗ್ಗಿ ಚಿನ್ನಾಭರಣವನ್ನು ಅಪಹರಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಮಳಿಗೆಯ ಮೇಲ್ಚಾವಣಿ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು 60 ಗ್ರಾಂ ಚಿನ್ನ, ಬೆಳ್ಳಿ, ಮತ್ತಿತರ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ. ಸಿಪಿಐ ಪಿ.ಕೆ.ರಾಜು, ಸಬ್‍ಇನ್ಸ್ ಪೆಕ್ಟರ್ ಎಚ್.ವೈ.ರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಗಲೇ ನುಗ್ಗಿದ ಕಳ್ಳ: ಮಾಯಮುಡಿಯ ಕಾಂಗ್ರೆಸ್ ಜಿಲ್ಲಾ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಅವರ ತೋಟದ ಮನೆಗೆ ಇಂದು ಹಾಡು ಹಗಲೇ ಕಳ್ಳ ನುಗ್ಗಿದ ಘಟನೆ ನಡೆದಿದೆ. ಟಾಟು ಮೊಣ್ಣಪ್ಪ ಬಾಳೆಲೆಯಲ್ಲಿ ನಡೆಯುತ್ತಿದ್ದ ಸೂಕ್ಷ್ಮ ಪರಿಸರ ವಲಯದ ಪ್ರತಿಭಟನಾ ರ್ಯಾಲಿಗೆ ತೆರಳಿದ್ದರು. ಇತ್ತ ಪತ್ನಿ ಸೌಮ್ಯ ಕೂಡ ಸ್ಥಳೀಯ ಗ್ರಾಮ ಪಂಚಾಯಿತಿ ಸಭೆಗೆ ಹೋಗಿದ್ದರು.

ಈ ವೇಳೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಹೆಂಚು ತೆಗೆದು ಒಳ ನುಗ್ಗಿರುವ ಕಳ್ಳ ಕೊಠಡಿಗಳ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಆದರೆ ಬಾಗಿಲುಗಳಿಗೆ ಬೀಗ ಹಾಕಿದ್ದರಿಂದ ಕೊಠಡಿಗಳಿಗೆ ನುಗ್ಗಲು ಸಾಧ್ಯವಾಗಿಲ್ಲ. ಬಳಿಕ ಮನೆಯ ಫ್ರಿಜ್‍ನಲ್ಲಿದ್ದ ಅರ್ಧ ಬಾಟಲ್ ಜ್ಯೂಸ್ ಕುಡಿದು ಅಡುಗೆ ಮನೆಗೆ ಹೋಗಿ ಅಲ್ಲಿದ್ದ ಮೂರು ರೊಟ್ಟಿಯನ್ನು ಖಾಲಿ ಮಾಡಿದ್ದಾನೆ. ಆನಂತರ ಮನೆಯ ಹಿಂದಿನ ಬಾಗಿಲು ತೆರೆದು ಹೊರ ಹೋಗಿದ್ದಾನೆ. ಮದ್ಯಾಹ್ನ 1 ಗಂಟೆ ಸುಮಾರಿಗೆ ಮನೆ ಒಡತಿ ಬಂದಾಗ ಘಟನೆ ಗೋಚರಿಸಿದೆ. -ವರದಿ : ಎನ್.ಎನ್.ದಿನೇಶ್