ಮಡಿಕೇರಿ, ಸೆ. 26 : ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ತಾ. 28 ರಂದು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಯುವ ದಸರಾ ಸಂಭ್ರಮಿಸಲಿದೆ. 3ಡಿ ಟೀಂ ಸಾರಥ್ಯದಲ್ಲಿ ಈ ಬಾರಿಯ ಯುವ ದಸರಾ ವಿಜೃಂಭಿಸಲಿದೆ ಎಂದು ಯುವ ದಸರಾ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರಾದ ಆರ್.ಬಿ.ರವಿ, ಯುವ ದಸರಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ತಾ. 28 ರಂದು ಸಂಜೆ 6.30 ರಿಂದ ರಾತ್ರಿ 12 ಗಂಟೆಯವರೆಗೆ 3ಡಿ ಟೀಂ ನೇತೃತ್ವದಲ್ಲಿ ಯುವ ಪ್ರೇಕ್ಷಕರನ್ನು ಆಕರ್ಷಿಸುವ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಇಂಡಿಯಾ ಗಾಟ್ ಟ್ಯಾಲೆಂಟ್ ಖ್ಯಾತಯ ಶರವಣನ್ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಡಿಜೆ ಸೋಮ್ ಅವರಿಂದ ಡಿಜೆ ಹಾಗೂ ಸ್ಥಳೀಯ 5 ನೃತ್ಯ ತಂಡಗಳಿಂದ ನೃತ್ಯ ವೈವಿಧ್ಯವನ್ನು ಆಯೋಜಿಸಲಾಗಿದೆ. ಸ್ಥಳೀಯ ತಂಡಗಳಿಗೆ ತಲಾ 6 ನಿಮಿಷಗಳನ್ನು ಸೀಮಿತಗೊಳಿಸ ಲಾಗಿದ್ದು, ತಂಡದಲ್ಲಿ 10 ರಿಂದ 24 ಸದಸ್ಯರಷ್ಟೆ ಇರಬೇಕೆಂದು ರವಿ ತಿಳಿಸಿದರು.

ತಮ್ಮ ತಂಡದ ನೃತ್ಯದ ವೀಡಿಯೋ ಕ್ಲಿಪ್‍ನ್ನು ಯುವ ದಸರಾ ಸಮಿತಿಗೆ ತಲುಪಿಸಿದಲ್ಲಿ ಇದನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡಿಕೊಳ್ಳಲಾಗುವದು ಎಂದರು.

ಕಾರ್ಯಕ್ರಮದಲ್ಲಿ ಕೊಡಗಿನ ಸಂಗೀತಗಾರ ಜೆಫ್ರಿ ಅಯ್ಯಪ್ಪ ಅವರ ಹಾಡುಗಾರಿಕೆ ಕೂಡ ಇರಲಿದೆ. ಅಖಿಲ್ ನಾಣಯ್ಯ ಅವರ ಗಿಟಾರ್ ವಾದನ ಆಕರ್ಷಿಸಲಿದೆ. ಯುವ ದಸರಾಕ್ಕಾಗಿ ಸುಮಾರು 2 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗು ತ್ತಿದ್ದು, ದಸರಾ ಸಮಿತಿಯಿಂದ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ ಯಾದರೂ ದಾನಿಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವದಾಗಿ ಸ್ಪಷ್ಟಪಡಿಸಿದರು.

ಖ್ಯಾತ ಟಿವಿ ನಿರೂಪಕಿ ಅರ್ಚನಾ ದೇಶ್‍ಮುಖ್ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಹೆಚ್ಚಿನ ಮಾಹಿತಿ ಗಾಗಿ 9480256444, 9448066599ನ್ನು ಸಂಪರ್ಕಿಸಬಹು ದಾಗಿದೆ ಎಂದು ರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸೋಮಶೇಖರ್, ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್, ಅಜ್ಜೆಟ್ಟಿರ ಲೋಕೇಶ್, ಎಸ್.ಸಿ. ಸತೀಶ್, ಪ್ರಭು ರೈ ಹಾಗೂ ಮೋಹನ್ ಉಪಸ್ಥಿತರಿದ್ದರು.