ಸೋಮವಾರಪೇಟೆ, ಸೆ. 26: ಹಲವಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿ ನಿವಾಸಿ ಅಂಗವಿಕಲರಾಗಿರುವ ಕಾರ್ಯಪ್ಪ ಅವರಿಗೆ ವೀಲ್ ಚೇರ್‍ನ್ನು ಉಚಿತವಾಗಿ ನೀಡಿದರು.

ಬಡ ಕುಟುಂಬದ ಅಯ್ಯಪ್ಪ ಅವರು ಅಂಗವೈಕಲ್ಯದಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಪಡೆದ ರವೀಂದ್ರ ಅವರು ಸುಮಾರು 12 ಸಾವಿರ ರೂಪಾಯಿ ವೆಚ್ಚದಲ್ಲಿ ವೀಲ್ ಚೇರ್ ಖರೀದಿಸಿ ತಮ್ಮ ಮನೆಯ ಆವರಣದಲ್ಲಿ ಕಾರ್ಯಪ್ಪ ಅವರಿಗೆ ವಿತರಿಸಿದರು.

ಸಂಘ-ಸಂಸ್ಥೆಗಳೂ ಸೇರಿದಂತೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಮತ್ತು ಪುಸ್ತಕಗಳ ರೂಪದಲ್ಲೂ ಸಹಾಯ ಹಸ್ತ ನೀಡುತ್ತಿರುವ ರವೀಂದ್ರ ಅವರು ಕೊಡುಗೈ ದಾನಿಯಾಗಿದ್ದು, ನೊಂದವರ ನೆರವಿಗೆ ಸಹಾಯ ಹಸ್ತ ಚಾಚುತ್ತಲೇ ಬಂದಿದ್ದಾರೆ.

ವೀಲ್ ಚೇರ್ ವಿತರಣೆ ಸಂದರ್ಭ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಸದಸ್ಯ ಕಿರಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.