ಮಡಿಕೇರಿ, ಸೆ. 26: ಗಾಂಧಿ ಮೈದಾನದಲ್ಲಿಂದು, ಮಕ್ಕಳ ದಸರಾ ಸಂಭ್ರಮ ಒಂದೆಡೆ ಕಂಡು ಬಂದರೆ ಇನ್ನೊಂದೆಡೆ ಜಿಲ್ಲಾ ಮಟ್ಟದ ರೋಮಾಂಚನಕಾರಿ ಕಬಡ್ಡಿ ಪಂದ್ಯಾಟ ನಡೆಯಿತು. ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ಆಶ್ರಯದಲ್ಲಿ ನಡೆದ ಕಬಡ್ಡಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ತಂಡಗಳು ಭಾಗವಹಿಸಿದ್ದವು. ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ನಗರಸಭಾ ಉಪಾಧ್ಯಕ್ಷ ಹಾಗೂ ನಗರ ದಸರಾ ಸಮಿತಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಆಟಗಾರರಿಗೆ ಶುಭ ಕೋರಿ ಮಾತನಾಡಿ, ಕ್ರೀಡೆಗಳು ಮನುಷ್ಯ ಜೀವನದ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ.

(ಮೊದಲ ಪುಟದಿಂದ) ಸ್ಪರ್ಧಿಗಳು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭ ಮೈಸೂರಿನ ಉದ್ಯಮಿ ಮಹಮ್ಮದ್ ನಾಸೀರ್, ಮಡಿಕೇರಿ ಉದ್ಯಮಿಗಳಾದ ಪ್ರಸನ್ನ ಭಟ್, ಮುಳಿಯ ಕೇಶವ ಪ್ರಸಾದ್, ನಗರ ಸಭಾ ಆಯುಕ್ತೆ ಬಿ. ಶುಭಾ, ಕರ್ನಾಟಕ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಕೊಡಗು ಜಿಲ್ಲಾಧ್ಯಕ್ಷ ಹೆಚ್.ಎಸ್. ಉತ್ತಪ್ಪ ಹಾಗೂ ಇನ್ನಿತರರು ಇದ್ದರು. ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಕೆ. ಜಗದೀಶ್ ಸ್ವಾಗತಿಸಿ, ಉಪಾಧ್ಯಕ್ಷ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು.