ಸೋಮವಾರಪೇಟೆ, ಸೆ. 25: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 48.44ಲಕ್ಷ ರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ತಿಳಿಸಿದರು.

ಸಮೀಪದ ಬಳಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸ ಲಾಗಿರುವ ಸಂಘದ ಕಟ್ಟಡದಲ್ಲಿ ನಡೆದ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಂಘ ಒಟ್ಟು 4012 ಸದಸ್ಯರನ್ನು ಹೊಂದಿದ್ದು, ರೂ. 216ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. ಒಟ್ಟು 38ಕೋಟಿ ರೂ. ದುಡಿಮೆ ಬಂಡವಾಳ ಹೊಂದಿದ್ದು, ಸಂಘದ ಸದಸ್ಯರಿಗೆ ಶೇ. 10ರಂತೆ ಲಾಭಾಂಶ ನೀಡುವಂತೆ ತೀರ್ಮಾನಿಸಲಾಗಿದೆ ಎಂದರು.

ಅಬ್ಬೂರುಕಟ್ಟೆ ಗ್ರಾಮ ಹಾಗೂ ಬಳಗುಂದ ಗ್ರಾಮದಲ್ಲಿ ಸಂಘದ ಶಾಖೆಗಳಿದ್ದು, ಸದಸ್ಯರಿಗೆ ಕೃಷಿ ಸಾಲ, ಆಭರಣ ಸಾಲ, ವಾಹನ ಖರೀದಿ ಸಾಲ ಹಾಗೂ ಜಾಮೀನು ಸಾಲವನ್ನು ನೀಡಲಾಗುತ್ತಿದೆ. ಬಳಗುಂದ ಗ್ರಾಮದಲ್ಲಿ ಸಂಘ 27 ಸೆಂಟ್ ಜಾಗವನ್ನು ಹೊಂದಿದ್ದು, ಬ್ಯಾಂಕ್‍ನ ಶಾಖಾ ಕಚೇರಿ ಹಾಗೂ ಗೊಬ್ಬರದ ಗೋದಾಮಿಗೆ ಬಳಸಿಕೊಳ್ಳಲಾಗುತ್ತದೆ ಎಂದರು.

ಸಂಘದ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷರಾದ ಬಿ.ಡಿ. ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘದ 424ಸದಸ್ಯರು ರಾಜ್ಯ ಸರ್ಕಾರದ ಸಾಲಮನ್ನಾದ ಲಾಭ ಪಡೆದಿದ್ದಾರೆ ಎಂದರು.

ಇದೇ ಸಂದರ್ಭ ಸಂಘದ ಸದಸ್ಯರು ಹಾಗೂ ಸದಸ್ಯೇತರ ಮಕ್ಕಳ ಶಿಕ್ಸಣಕ್ಕೆ ಪ್ರೋತ್ಸಾಹಧನ ವಿತರಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುಮಾ ಸುದೀಪ್, ಎಂ.ಎಸ್. ಲಕ್ಷ್ಮೀಕಾಂತ, ಕೆ.ಎಸ್. ದಾಸಪ್ಪ, ಜಿ.ಬಿ. ಸೋಮಯ್ಯ, ಎಸ್.ಎನ್. ಸೋಮಶೇಖರ್, ಕೆ.ಜಿ. ಸುರೇಶ್, ರೂಪಾ ಸತೀಶ್, ನಳಿನಿ ಗಣೇಶ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಉಪಸ್ಥಿತರಿದ್ದರು.