ಕುಶಾಲನಗರ, ಸೆ. 27: ಕುಶಾಲನಗರ ಪಟ್ಟಣ ಪಂಚಾಯಿತಿಯ ಕೊನೆಯ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಕೆ.ಆರ್.ರೇಣುಕಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಟ್ಟಣದ 1ನೇ ವಾರ್ಡ್‍ನ ಕೆ.ಆರ್. ರೇಣುಕಾ ಮುಂದಿನ ಅವಧಿಯ ಅಧ್ಯಕ್ಷರಾಗಿ ನೇಮಕಗೊಂಡರು. ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಎಂ.ಎಂ. ಚರಣ್ ರಾಜೀನಾಮೆಯಿಂದ ತೆರವಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ತಾಲೂಕು ತಹಶೀಲ್ದಾರ್ ಮಹೇಶ್ ಅವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಸ್ಥಳೀಯ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಲೋಕಸಭಾ ಸದಸ್ಯ ಪ್ರತಾಪ್‍ಸಿಂಹ ಉಪಸ್ಥಿತರಿದ್ದರು. ಉಪಾಧ್ಯಕ್ಷರಾಗಿ ಜೆಡಿಎಸ್‍ನ ಟಿ.ಆರ್. ಶರವಣಕುಮಾರ್ ಮುಂದುವರೆದಿದ್ದಾರೆ.

ಕುಶಾಲನಗರ ಪಂಚಾಯಿತಿಯ ಪ್ರಥಮ 3 ವರ್ಷ ಅವಧಿಯಲ್ಲಿ ಡಿ.ಕೆ. ತಿಮ್ಮಪ್ಪ, ಎರಡನೇ ಅವಧಿಗೆ ಎಂ.ಎಂ. ಚರಣ್ ಇದೀಗ ಕೊನೆಯ ಅವಧಿಗೆ ರೇಣುಕಾ ಅಧ್ಯಕ್ಷರಾಗಿದ್ದಾರೆ.

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷೆ ರೇಣುಕಾ ಕುಶಾಲನಗರ ಅಭಿವೃದ್ಧಿಗೆ ಶ್ರಮಿಸುವದಾಗಿ ಭರವಸೆ ನೀಡಿದರು.