ಮಡಿಕೇರಿ, ಸೆ. 27: ಕಟ್ಟೆಮಾಡುವಿನ ಗ್ರೀನ್ಸ್ ಯುವಕ ಸಂಘದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಅ. 2 ರಂದು ಜಿಲ್ಲಾಮಟ್ಟದ ಮುಕ್ತ ಹಗ್ಗ ಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯವ ಸ್ಪರ್ಧೆ ಹಾಗೂ ವಿವಿಧ ಆಟೋಟಗಳನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕಟ್ಟೆಮನೆ ರೋಶನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ ಹಾಗೂ ಮರಗೋಡು ಗ್ರಾಮ ಪಂಚಾಯಿತಿ. ಕಟ್ಟೆಮಾಡು ಆದರ್ಶ ಯುವತಿ ಮಂಡಳಿ ಸಹಯೋಗದಲ್ಲಿ ಮರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂದು ಪೂರ್ವಾಹ್ನ 9 ಗಂಟೆಯಿಂದ ಸಂಜೆ 5 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಕ್ರೀಡಾಕೂಟದಲ್ಲಿ ಮುಕ್ತ ಹಗ್ಗ ಜಗ್ಗಾಟ ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಪ್ರಮುಖವಾಗಿದ್ದು, ಪುರುಷರ ಹಗ್ಗಜಗ್ಗಾಟದಲ್ಲಿ ಜಯಗಳಿಸುವ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿ (ಪ್ರಥಮ), 6ಸಾವಿರ ನಗದು ಮತ್ತು ಟ್ರೋಫಿ (ದ್ವಿತೀಯ) ಬಹುಮಾನವಾಗಿ ನೀಡಲಾಗುತ್ತದೆ. ಮಹಿಳೆಯರ ಹಗ್ಗಜಗ್ಗಾಟಕ್ಕೆ ಕ್ರಮವಾಗಿ ರೂ. 6 ಸಾವಿರ ಮತ್ತು 4 ಸಾವಿರ ಹಾಗೂ ಟ್ರೋಫಿ ನೀಡಲಾಗುತ್ತದೆ. ಪುರುಷರಿಗೆ ರೂ. 750 ಹಾಗೂ ಮಹಿಳಾ ತಂಡಕ್ಕೆ ರೂ. 300 ಮೈದಾನ ಶುಲ್ಕ ನಿಗದಿಪಡಿಸಲಾಗಿದ್ದು, ಸ್ಥಳದಲ್ಲಿ ಹೆಸರು ನೋಂದಾಯಿಸಿ ಶುಲ್ಕ ಪಾವತಿಸಬಹುದಾಗಿದೆ ಎಂದು ಹೇಳಿದರು.

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ವಿಜೇತರಿಗೆ ಕ್ರಮವಾಗಿ 5 ಸಾವಿರ (ಪ್ರಥಮ) 3 ಸಾವಿರ (ದ್ವಿತೀಯ) ಹಾಗೂ 2 ಸಾವಿರ (ತೃತೀಯ) ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಇದರೊಂದಿಗೆ 100, 200, 800, 1500 ಮೀಟರ್ ಓಟದ ಸ್ಪರ್ಧೆಗಳು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದ್ದು, ಪುರುಷರಿಗೆ 8 ಕಿ.ಮೀ. ಮ್ಯಾರಥಾನ್ ಆಯೋಜಿಸಲಾಗಿದೆ. ಆಟೋಟ ಕಾರ್ಯಕ್ರಮಗಳ ಜತೆಗೆ ಪ್ರೇಕ್ಷಕರಿಗಾಗಿ ವಿವಿಧ ರೀತಿಯ ಮನೋರಂಜನಾ ಕ್ರೀಡಾ ಕಾರ್ಯಕ್ರಮಗಳೂ ನಡೆಯಲಿವೆ ಎಂದು ರೋಶನ್ ತಿಳಿಸಿದರು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7760688188 ಅಥವಾ 9483621632ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಇಂದು ಸ್ವಚ್ಛತಾ ಕಾರ್ಯಕ್ರಮ

ಗ್ರೀನ್ಸ್ ಯುವಕ ಸಂಘದ ಸದಸ್ಯರಿಂದ ತಾ. 28 ರಂದು (ಇಂದು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಹಾಗೂ ಸಂಘದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವ ಮೂಲಕ ಸ್ವಚ್ಛತಾ ಆಂದೋಲನ ನಡೆಸಲಾಗುವದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿದ್ರುಪಣೆ ಅಯ್ಯಪ್ಪ, ಖಜಾಂಚಿ ಬಿದ್ರುಪಣೆ ವಿಕಾಸ್, ಸಹ ಕಾರ್ಯದರ್ಶಿ ಬಿದ್ರುಪಣೆ ಧ್ರುವ (ದೀಪು) ಹಾಜರಿದ್ದರು.