ಗೋಣಿಕೊಪ್ಪಲು, ಸೆ. 27: ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ, ಕೊಡವ ಕೂಟ, ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಹಾಗೂ ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಸಹಯೋಗದಲ್ಲಿ ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ತಾ. 29 ರಿಂದ ಅಕ್ಟೋಬರ್ 1 ವರೆಗೆ ನಡೆಯಲಿರುವ ಕೊಡವ, ಅಮ್ಮ ಕೊಡವ ವಾಲಿಬಾಲ್ ಕಪ್‍ಗೆ 24 ತಂಡಗಳು ಸೆಣೆಸಾಟ ನಡೆಸಲಿವೆ.

ವಾಲಿಬಾಲ್ ಕಪ್‍ಗೆ ತಾ. 29 ರಂದು ಚಾಲನೆ ನೀಡಲಾಗುವದು. ಮೊದಲ ದಿನ ಬೆಳಿಗ್ಗೆ 11 ಕ್ಕೆ ಮಲ್ಲಮಾಡ, ನೆಲ್ಲೀರ, 11.30 ಕ್ಕೆ ಅಮ್ಮತ್ತೀರ, ಬಲ್ಯಂಡ, ಮ. 12 ಕ್ಕೆ ಚೆಪ್ಪುಡೀರ, ಬೊಳ್ಳಿಯಡ, 12.30 ಕ್ಕೆ ಕನ್ನಿಗಂಡ, ಕರ್ತಮಾಡ, 1.30 ಕ್ಕೆ ಅಪ್ಪುಡ, ಮಾಚಂಗಡ, 2 ಕ್ಕೆ ಕೊಣಿಯಂಡ, ಬೊಟ್ಟಂಗಡ ತಂಡಗಳು ಮೊದಲ ಹಂತದಲ್ಲಿ ಸೆಣೆಸಾಟ ನಡೆಸಲಿವೆ. ಉಳಿದಂತೆ ಮುಂಡಚಾಡೀರ, ಅಣ್ಣಳಮಾಡ, ಚೆರಿಯಪಂಡ, ಆಪಟ್ಟೀರ, ಅಚ್ಚಿಯಂಡ, ಮಲ್ಲಂಗಡ, ಅಮ್ಮಂಡ, ಮುಕ್ಕಾಟೀರ, ಕೊಟ್ಟಂಗಡ, ಸಣ್ಣುವಂಡ, ದೇಯಂಡ, ಮಂಡುವಂಡ ತಂಡಗಳು ಪಾಲ್ಗೊಳ್ಳುತ್ತಿವೆ.

ಕ್ರೀಡಾಕೂಟವನ್ನು ಅಂದು ಬೆಳಿಗ್ಗೆ 10 ಗಂಟೆಗೆ ಕಾಫಿ ಬೆಳೆಗಾರ ಮದ್ರೀರ ಕರುಂಬಯ್ಯ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಮಾಯಮುಡಿ ಗ್ರಾ.ಪಂ. ಅಧ್ಯಕ್ಷೆ ಬಲ್ಯಂಡ ಭವಾನಿ ಮೋಹನ್, ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ, ತಾ.ಪಂ. ಸದಸ್ಯೆ ಬಿ.ಕೆ. ಸುಮಾ ಉಪಸ್ಥಿತರಿರುವರು.

ಅಕ್ಟೋಬರ್ 1 ರಂದು ಮಧ್ಯಾಹ್ನ 2 ಗಂಟೆಗೆ ಅಂತಿಮ ಹಣಾಹಣಿ ನಡೆಯಲಿದೆ. ಅಂದು 10.30 ಕ್ಕೆ ನಡೆಯುವ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಅಳಮೇಂಗಡ ವಿವೇಕ್ ಅಯ್ಯಪ್ಪ, ವಾಲಗತ್ತಾಟ್ ಉದ್ಘಾಟನೆಯನ್ನು ಕಾಫಿ ಬೆಳೆಗಾರ ಮಲ್ಲೇಂಗಡ ಕವನ ಕುಶಾಲಪ್ಪ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಅತಿಥಿಗಳಾಗಿ ಕಾಫಿ ಬೆಳೆಗಾರರುಗಳಾದ ಜಮ್ಮಡ ಸಿ ಮೋಹನ್, ಚೆಕ್ಕೇರ ಕಾಳಯ್ಯ, ಗುಂಬೀರ ಜೀವನ್, ಉದ್ಯಮಿ ಬಾಲಾಜಿ ಸಿಂಗ್, ವಾಲಿಬಾಲ್ ರಾಷ್ಟ್ರೀಯ ಆಟಗಾರ ಸುದೀಪ್ ಶೆಟ್ಟಿ ಪಾಲ್ಗೊಳ್ಳಲಿರುವರು.