ಶ್ರೀಮಂಗಲ, ಸೆ. 29: ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘವು ‘ಎ’ ದರ್ಜೆಯಲ್ಲಿದ್ದು ರೂ 36.17 ಲಕ್ಷ ಲಾಭ ಹೊಂದಿದ್ದು, ಸಂಘದ ಬೈಲಾನುಸರಿಸಿ ಲಾಭ ವಿಂಗಡಣೆ ಮಾಡಲಾಗುವದು. ಶೇ. 13 ರಂತೆ ಡಿವಿಡೆಂಡ್ ಕೊಡಲಾಗುವದು ಎಂದು ಸಂಘದ ಪ್ರಬಾರ ಅಧ್ಯಕ್ಷ ಕೆ.ಎನ್. ಸಂದೀಪ್ ಸಭೆಯಲ್ಲಿ ಹೇಳಿದರು.

2016-17ನೇ ಸಾಲಿನ ಸಂಘದ ಮಹಾಸಭೆಯಲ್ಲಿ ಮಾತನಾಡಿ, ಸಂಘವು 123.40 ಲಕ್ಷ ಶೇರು ಬಂಡವಾಳ, ರೂ. 167.18 ಲಕ್ಷ ಠೇವಣಿ ಹೊಂದಿದೆ. ಸಂಘದಿಂದ ಕೃಷಿ ಸಾಲ ರೂ 857 ಲಕ್ಷ, ಕೃಷಿಯೇತರ ಸಾಲ ರೂ. 1130.23 ಲಕ್ಷ ಪಾವತಿಸಲಾಗಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷರಾಗಿದ್ದ ಎ.ಎಸ್. ಕರುಂಬಯ್ಯ ಅವರು ನಿಧನ ಹೊಂದಿದ ಕಾರಣ ಅವರಿಗೆ ಸಭೆಯಲ್ಲಿ ಸಂತಾಪ ಸೂಚಿಸಿ ಮೃತಪಟ್ಟ ಸದಸ್ಯರುಗಳಿಗೂ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಹಾಲಿ ನಿರ್ದೇಶಕರುಗಳಾದ ಎಸ್.ಬಿ. ಪರಶಿವ, ಅಜ್ಜಮಾಡ ಕೆ. ಚಂಗಪ್ಪ (ರಂಜಿ), ಕಾಳಿಮಾಡ ಎನ್. ಪ್ರಶಾಂತ್, ಅರೆಯಡ ಟಿ. ಬೊಳ್ಳಮ್ಮ (ನಿಶಾ), ಚಟ್ಟಂಗಡ.ಕೆ.ಗೀತಾ, ಅಲ್ಲುಮಾಡ ಡಿ. ಮುಕುಂದ, ಯು.ಆರ್. ಪುರುಷೋತ್ತಮ್, ಹೆಚ್.ಎಸ್. ಕೇತು, ಕೆ.ಡಿ.ಸಿ.ಸಿ. ಬ್ಯಾಂಕಿನ ಮೇಲ್ವಿಚಾರಕ ಬಿ.ಜೆ. ಇಂದ್ರೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಸ್.ಬಿ. ಯತಿರಾಜ್ ಹಾಜರಿದ್ದರು.