ಗೋಣಿಕೊಪ್ಪಲು, ಸೆ. 29 : ಆಯುಧ ಪೂಜೆ ದಿನವಾದ ಇಂದು ಎಲ್ಲೆಡೆ ವಾಹನ ಅಲಂಕಾರ, ಅನ್ನದಾನ ಕಂಡು ಬಂತು. ಇಲ್ಲಿನ ನವಚೇತನ ದಸರಾ ಸಮಿತಿ 29 ವರ್ಷವನ್ನು ಪೂರೈಸಿದ್ದು, ಮಾರುಕಟ್ಟೆ ವರ್ತಕರ ಸಹಕಾರದೊಂದಿಗೆ ಅನ್ನದಾನ ಕಾರ್ಯಕ್ರಮವನ್ನೂ ಏರ್ಪಡಿಸುತ್ತಾ ಬಂದಿದೆ. ಇಂದೂ ಕೂಡಾ ಸಾರ್ವಜನಿಕ ಅನ್ನದಾನ ಏರ್ಪಡಿಸಿದ್ದು, ಮಧ್ಯಾಹ್ನದ ವೇಳೆಗೆ ಭರ್ಜರಿ ಜನಸಂದಣಿಯಿಂದಾಗಿ ಊಟವೆಲ್ಲಾ ಖಾಲಿ. ಗೋಣಿಕೊಪ್ಪಲು ವಾಹನ ಚಾಲಕರ ಸಂಘ ಹಾಗೂ ಆಟೋ ಚಾಲಕರ ಮಾಲೀಕರ ಸಂಘ ಸರಳವಾಗಿ ಆಯುಧಪೂಜೆಯನ್ನು ನೆರವೇರಿಸಿದವು.ಮಡಿಕೇರಿಯಂತೆ ಗೋಣಿಕೊಪ್ಪಲಿನ ಎಲ್ಲ ಮಂಟಪಗಳು ಮಹಾಭಾರತ, ರಾಮಾಯಣ ಕಥಾ ಭಾಗವನ್ನು ಬಿಂಬಿಸದಿದ್ದರೂ ಕೆಲವು ಮಂಟಪಗಳು ಮಡಿಕೇರಿ ಮಾದರಿ ಕಥಾ ಭಾಗವನ್ನು ತಮ್ಮ ಉತ್ಸವ ಮೂರ್ತಿ ಮೆರವಣಿಗೆ ಸಂದರ್ಭ ಅಳವಡಿಸಿಕೊಳ್ಳುತ್ತಿವೆ. ಈ ಬಾರಿ ಎಲ್ಲ ಮಂಟಪಗಳಿಗೂ ಸರ್ಕಾರದ ಅನುದಾನ ಲಭ್ಯವಾದ ನಂತರ ತಲಾ ರೂ.70 ಸಾವಿರ ಮೊತ್ತ ನೀಡಲಾಗುವದು ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಭರವಸೆ ನೀಡಿದ್ದಾರೆ.

ಶ್ರೀ ಕಾವೇರಿ ದಸರಾ ಸಮಿತಿ

ಶ್ರೀ ಕಾವೇರಿ ದಸರಾ ಸಮಿತಿ ದಶಮಂಟಪ ಸ್ಪರ್ಧೆಯಲ್ಲಿ ಭಾಗವಹಿಸುವದಿಲ್ಲ. ನವರಾತ್ರಿಯಂದು ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ದಿನವೂ ಪೂಜೆ ಸಲ್ಲಿಸಿ ದಶಮಂಟಪ ಶೋಭಾಯಾತ್ರೆಯಲ್ಲಿ ಮುಂಚೂಣಿ ಯಲ್ಲಿ ಮಂಟಪ ಮೆರವಣಿಗೆಯಲ್ಲಿ ಸಾಗುವದು ವಿಶೇಷ. ನೂತನ ಅಧ್ಯಕ್ಷರಾಗಿ ಕುಲ್ಲಚಂಡ ಪ್ರಮೋದ್ ಗಣಪತಿ ತೊಡಗಿಸಿ ಕೊಂಡಿದ್ದು, ಸೀಗೆತೋಡುವಿನ ದಿ.ಚೆಲುವ ಹಾಗೂ ಯಶೋಧ ಚಿತ್ರಾ ಅವರ ಕೆರೆಯಲ್ಲಿ ತಾ.1 ರಂದು

(ಮೊದಲ ಪುಟದಿಂದ) ಮುಂಜಾನೆ ಚಾಮುಂಡೇಶ್ವರಿ ವಿಗ್ರಹವನ್ನು ವಿಸರ್ಜಿಸಲಾಗುತ್ತದೆ.

ಸ್ನೇಹಿತರ ಬಳಗ ಕೊಪ್ಪ

ಇಲ್ಲಿನ ಪಾಲಿಬೆಟ್ಟ ರಸ್ತೆಯ ಸ್ನೇಹಿತರ ಬಳಗ ಕೊಪ್ಪ 29ನೇ ವರ್ಷದ ದಸರಾ ಮಹೋತ್ಸವವನ್ನು ಆಚರಿಸುತ್ತಿದ್ದು, ಈವರೆಗೆ ಸುಮಾರು 13 ಬಾರಿ ಪ್ರಥಮ ಸ್ಥಾನ ಗೆದ್ದುಕೊಂಡಿದೆ. ಸುಮಾರು ರೂ.3.5 ಲಕ್ಷವೆಚ್ಚದಲ್ಲಿ ಕೇರಳದ ಕಣ್ಣೂರುವಿನ ಫೇಮಸ್ ಎಂಟರ್ ಪ್ರೈಸಸ್‍ನ ಪ್ರಭಾವಳಿಯೊಂದಿಗೆ 15 ವಿಗ್ರಹಗಳು ಮಂಟಪದಲ್ಲಿ ಅಳವಡಿಸಲಾಗುತ್ತದೆ. ಶಿವಪುರಾಣದ 103ನೇ ಅಧ್ಯಾಯದ ಶಿವನಿಂದ ಅಂದಕಾಸುರನ ವಧೆ ಚಿತ್ರಣವನ್ನು ಮಂಟಪ ಬಿಂಬಿಸಲಿದೆ. ಕಾಡ್ಯಮಾಡ ಚೇತನ್ ಸ್ನೇಹಿತರ ಬಳಗದ ನೂತನ ಅಧ್ಯಕ್ಷರಾಗಿದ್ದಾರೆ.

ನಾಡಹಬ್ಬ ದಸರಾ ಸಮಿತಿ

ನಾಡಹಬ್ಬ ದಸರಾ ಸಮಿತಿಯ ಪ್ರಮುಖ ಆಕರ್ಷಣೆ ಸ್ತಬ್ಧ ಚಿತ್ರ ಮೆರವಣಿಗೆ. ವಿಶೇಷ ವಿದ್ಯುತ್ ಅಲಂಕೃತ ಪ್ರಭಾವಳಿ ನಡುವೆ ಭಾರತಾಂಬೆಯ ಚಿತ್ರವನ್ನು ಶೋಭಾಯಾತ್ರೆ ಸಂದರ್ಭ ಅಳವಡಿಸಿಕೊಳ್ಳುವದು ವಾಡಿಕೆ. ನಾಡಹಬ್ಬ ದಸರಾ ಸಮಿತಿಯೂ ದಶಮಂಟಪ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಬಾರಿ ಸುಮಾರು 10 ಸ್ತಬ್ಧ ಚಿತ್ರಗಳನ್ನು ಶೋಭಾ ಯಾತ್ರೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಧ್ಯಕ್ಷ ಅಜ್ಜಿಕುಟ್ಟೀರ ರಿಷಿ ಕಾವೇರಪ್ಪ ತಿಳಿಸಿದ್ದಾರೆ. ಕಳೆದ ಮೂರು ವರ್ಷದಿಂದ ಅಧ್ಯಕ್ಷರಾಗಿ ಮುಂದುವರೆದಿದ್ದು, ಸ್ತಬ್ಧ ಚಿತ್ರ ಮೆರವಣಿಗೆಯನ್ನು ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಹೆಚ್.ವೈ. ರಾಜು ಉದ್ಘಾಟಿಸಲಿದ್ದು, ಪ್ರಥಮ ಬಹುಮಾನ ರೂ. 20 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ.15 ಸಾವಿರ ಹಾಗೂ ತೃತೀಯ ಬಹುಮಾನ ರೂ.10 ಸಾವಿರ ನಗದು ಮತ್ತು ಟ್ರೋಫಿಯನ್ನು ನೀಡುತ್ತಾ ಬರಲಾಗಿದೆ ಎಂದು ತಿಳಿಸಿದ್ದಾರೆ. ಈ ಬಾರಿ ಪ್ರಚಾರದಲ್ಲಿ ಕೊರತೆ ಉಂಟಾಗಿದ್ದು ಸ್ತಬ್ಧಚಿತ್ರ ಪ್ರದರ್ಶನದ ಮೇಲೆಯೂ ಪರಿಣಾಮ ಉಂಟಾಗಿದೆ. ಸುಮಾರು 10 ಸ್ತಬ್ಧಚಿತ್ರಗಳು ಗೋಣಿಕೊಪ್ಪಲು, ಪೆÇನ್ನಂಪೇಟೆ, ಪಾಲಿಬೆಟ್ಟ, ದೇವರಪುರ, ತಿತಿಮತಿಯಿಂದ ಪಾಲ್ಗೊಳ್ಳುತ್ತಿರು ವದಾಗಿ ತಿಳಿಸಿದ್ದಾರೆ.

ನಮ್ಮ ದಸರಾ ಸಮಿತಿ

ನಮ್ಮ ದಸರಾ ಸಮಿತಿ ಇದೀಗ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಆಕರ್ಷಕ ಮಂಟಪವನ್ನು ಶೋಭಾಯಾತ್ರೆಯಲ್ಲಿ ಪ್ರದರ್ಶಿಸುವ ಉತ್ಸಾಹದಲ್ಲಿದೆ. ಈ ಬಾರಿ ಕರ್ತಂಡ ಸೋಮಣ್ಣ ನಮ್ಮ ದಸರಾ ಸಮಿತಿ ಅಧ್ಯಕ್ಷರಾಗಿದ್ದು ಸುಮಾರು 10 ಬಾರಿ ಪ್ರಥಮ ಬಹುಮಾನ ಗೆದ್ದುಕೊಂಡಿದೆ. ಹರಿಶ್ಚಂದ್ರಪುರದಿಂದ ಮಂಟಪ ಹೊರಡಲಿದ್ದು, ರೂ. ನಾಲ್ಕು ಲಕ್ಷ ವೆಚ್ಚದಲ್ಲಿ ಗಣಪತಿಯಿಂದ ಗಜಾಸುರನ ವಧೆ ಕಥಾ ಭಾಗವನ್ನು ಹೊಂದಿದೆ.

ಶ್ರೀ ಶಾರದಾಂಭ ದಸರಾ ಸಮಿತಿ

ಅರುವತ್ತೊಕ್ಕಲುವಿನ ಶ್ರೀ ಶಾರದಾಂಭ ದಸರಾ ಸಮಿತಿ ದೇವಿಯಿಂದ ಮೂಕಾಸುರನ ವಧೆ ಎಂಬ ಕಥಾ ಭಾಗವನ್ನು ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಅಳವಡಿಸಿಕೊಂಡಿದ್ದು, ಸುಮಾರು ರೂ.4 ಲಕ್ಷ ವೆಚ್ಚದಲ್ಲಿ ಕಥಾರೂಪಕ ವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಧ್ಯಕ್ಷ ಕಿರಣ್ ತಿಳಿಸಿದ್ದಾರೆ. ಸುಮಾರು 5 ಬಾರಿ ಪ್ರಥಮ ಸ್ಥಾನ ಗಳಿಸಿರುವ ಸಮಿತಿ 29 ನೇ ವರ್ಷದ ದಸರಾ ಮಹೋತ್ಸವ ಆಚರಣೆಯಲ್ಲಿದೆ. ಸುಮಾರು 25 ಕಲಾಕೃತಿಗಳನ್ನು ಅಳವಡಿಸಿಕೊಳ್ಳುತ್ತಿರುವದಾಗಿ ತಿಳಿಸಿದ್ದಾರೆ.

ಶ್ರೀ ಭಗವತಿ ಯುವ ದಸರಾ ಸಮಿತಿ

ಇಲ್ಲಿನ ಕೈಕೇರಿ ಗ್ರಾಮದ ಶ್ರೀ ಭಗವತಿ ಯುವ ದಸರಾ ಸಮಿತಿ ಈ ಬಾರಿ ಚಿಯಕ್‍ಪೂವಂಡ ಸುಬ್ರಮಣಿ ಅಧ್ಯಕ್ಷತೆಯಲ್ಲಿ ಚಂಡ ಮುಂಡನ ವಧೆ ಕಥಾ ಭಾಗವನ್ನು ಹೊಂದಿದೆ. ಸುಮಾರು 11 ವರ್ಷ ಪೂರೈಸಿದ್ದು ಸುಮಾರು ರೂ.3 ಲಕ್ಷ ವೆಚ್ಚದಲ್ಲಿ 20ಕ್ಕೂ ಅಧಿಕ ವಿಗ್ರಹಗಳನ್ನು ಶೋಭಾಯಾತ್ರೆಯಲ್ಲಿ ಪ್ರದರ್ಶಿಸಲಾಗುತ್ತಿದೆ ಎನ್ನಲಾಗಿದೆ. ಕೈಕೇರಿ ಗ್ರಾಮದ ಜನತೆಗೆ ಹಲವು ವರ್ಷ ತನ್ನದೇ ಆದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಉಣಬಡಿಸಿದ್ದು, ವಿಜಯದಶಮಿ ಯಂದು ಅನ್ನದಾನ ಕಾರ್ಯಕ್ರಮವೂ ಇದೆಯೆಂದು ತಿಳಿಸಿದ್ದಾರೆ.

ನವಚೇತನಾ ದಸರಾ ಸಮಿತಿ

ಇಲ್ಲಿನ ಮಾರುಕಟ್ಟೆ ವರ್ತಕರ ಸಹಕಾರದೊಂದಿಗೆ ನವಚೇತನಾ ದಸರಾ ಸಮಿತಿ 28ನೇ ದಸರಾ ಮಹೋತ್ಸವವನ್ನು ಆಚರಿಸುತ್ತಿದೆ. ಕಳೆದ ಬಾರಿ ಬೆಳ್ಳಿ ಹಬ್ಬವನ್ನೂ ಅದ್ಧೂರಿಯಾಗಿ ಆಚರಿಸಿದ್ದು ಈ ಬಾರಿ ಕರ್ಣರಾಜು ತಂಬಿ ಅಧ್ಯಕ್ಷತೆಯಲ್ಲಿ ಕಾವೇರಿ ಮಾತೆಯ ವಿಗ್ರಹವು ಪ್ರಮುಖ ಆಕರ್ಷಣೆಯಾಗಿದೆ. ಆಯುಧಪೂಜೆ ದಿನ ಅನ್ನದಾನವೇ ಇವರ ಪ್ರಮುಖ ಕಾರ್ಯಕ್ರಮವಾಗಿದೆ.

ಸರ್ವರ ದಸರಾ ಸಮಿತಿ

ಗೋಣಿಕೊಪ್ಪಲು 2ನೇ ವಿಭಾಗದಿಂದ 16 ನೇ ವರ್ಷದ ದಸರಾ ಆಚರಣೆ ಅಂಗವಾಗಿ ಸುಬ್ರಮಣ್ಯನ ಅವತಾರ ಚಿತ್ರಣ ದೊಂದಿಗೆ ಶೋಭಾಯಾತ್ರೆಯಲ್ಲಿ ಮಂಟಪ ಪಾಲ್ಗೊಳ್ಳಲಿದೆ. ಸುಮಾರು ರೂ.2 ಲಕ್ಷ ವೆಚ್ಚದಲ್ಲಿ ಕಾರ್ಮಿಕ ವರ್ಗವೇ ಅಧಿಕವಿರುವ 2 ನೇ ವಿಭಾಗದಿಂದ ತೇರು ಹೊರಡಲಿದೆ. ಅನೀಸ್ ಅವರು ಈ ಬಾರಿ ಸಮಿತಿ ಅಧ್ಯಕ್ಷರಾಗಿದ್ದು ದಸರಾ ಅಭಿಮಾನಿ ಗಳಿಗೆ ನಿರಾಶೆಯಾಗದಂತೆ ಶೋಭ ಯಾತ್ರೆ ಆಕರ್ಷಣೆಯನ್ನು ಹೆಚ್ಚಿಸ ಲಿದ್ದೇವೆ ಎಂದು ತಿಳಿಸಿದ್ದಾರೆ.

ಯುವ ದಸರಾ ಸಮಿತಿ

ಗೋಣಿಕೊಪ್ಪಲು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ರಾಜೇಶ್ ಅಧ್ಯಕ್ಷತೆಯಲ್ಲಿ 3ನೇ ವಿಭಾಗದ ಯುವ ದಸರಾ ಸಮಿತಿ ಈ ಬಾರಿ ಪಾತಾಳ ಗಣಪತಿಯಿಂದ ರಾಕ್ಷಸನ ವಧೆ ಕಥಾ ಭಾಗವನ್ನು ಒಳಗೊಂಡಿರುವ ಚಿತ್ರಣ ಅಳವಡಿಸಿದೆ. 11 ನೇ ವರ್ಷದ ಸಂಭ್ರಮದೊಂದಿಗೆ ಸುಮಾರು ರೂ.3 ಲಕ್ಷ ವೆಚ್ಚದಲ್ಲಿ 23 ದೇವರು ಹಾಗೂ ರಾಕ್ಷಸರ ಕಲಾಕೃತಿಯನ್ನು ಅಳವಡಿಸಲಾಗುತ್ತಿದೆ ಎಂದು ರಾಜೇಶ್ ತಿಳಿಸಿದ್ದಾರೆ.

ಕಾಡ್ಲಯ್ಯಪ್ಪ ದಸರಾ ಸಮಿತಿ

ಅರುವತ್ತೊಕ್ಕಲು ಕಾಫಿ ಮಂಡಳಿ ಕಚೇರಿ ಮುಂಭಾಗದಿಂದ ಹೊರಡುವ ಕಾಡ್ಲಯ್ಯಪ್ಪ ದಸರಾ ಸಮಿತಿ ಕಳೆದ 12 ವರ್ಷದಿಂದ ಶೋಭಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದೆ. ಅಜ್ಜಿಕುಟ್ಟೀರ ಸಜನ್ ಚಂಗಪ್ಪ ಅಧ್ಯಕ್ಷತೆಯಲ್ಲಿ ಕಳೆದ ಮೂರು ವರ್ಷದಿಂದ ಸಮಿತಿ ಕಾವೇರಿ ತೀರ್ಥ ವಿತರಣೆಯೊಂದಿಗೆ ಉತ್ತಮವಾದ ಕಲಾಕೃತಿಗಳನ್ನೂ ಅಳವಡಿಸಿ ಕೊಳ್ಳುತ್ತಿದೆ. ಒಂದು ಬಾರಿ ಪ್ರಥಮ ಬಹುಮಾನ ಗೆದ್ದಿರುವ ಕಾಡ್ಲಯ್ಯಪ್ಪ ದಸರಾ ಸಮಿತಿ ಈ ಬಾರಿ ವಿಭಿನ್ನ ವಾಗಿ ಶೋಭಾಯಾತ್ರೆಯಲ್ಲಿ ತಮ್ಮ ಆಕರ್ಷಣೆಯನ್ನು ಹೆಚ್ಚಿಸಲಿದ್ದು ಸುಮಾರು ರೂ.3 ಲಕ್ಷವೆಚ್ಚದಲ್ಲಿ ಮಂಟಪವನ್ನು ಹೊರಡಿಸಲಾಗುವದು ಎಂದು ತಿಳಿದು ಬಂದಿದೆ.