ಕುಶಾಲನಗರ, ಅ. 1: ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ನಡೆಯಲಿರುವ ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮಿಗಳ ಸಂಸ್ಮರಣೋತ್ಸವ ಹಾಗೂ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮಿಗಳ ಗುರುವಂದನಾ ಮತ್ತು ರಜತ ತುಲಾಭಾರ ಕಾರ್ಯಕ್ರಮದ ಜಾಗೃತಿ ರಥವನ್ನು ಕುಶಾಲನಗರದಲ್ಲಿ ಬರಮಾಡಿ ಕೊಳ್ಳಲಾಯಿತು.

ಮಡಿಕೇರಿ ಕಡೆಯಿಂದ ಆಗಮಿಸಿದ ರಥವನ್ನು ಒಕ್ಕಲಿಗ ಸಮುದಾಯ ಬಾಂಧವರು ಸ್ಥಳೀಯ ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿ ಬರಮಾಡಿ ಕೊಂಡರು. ರಥಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆಗೈದ ಬಳಿಕ ಮೆರವಣಿಗೆ ಮೂಲಕ ಕೊಂಡೊಯ್ದು ಸೋಮವಾರಪೇಟೆ ಕಡೆಗೆ ಬೀಳ್ಕೊಡಲಾಯಿತು.

ಈ ಸಂದರ್ಭ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎಂ.ಕೆ. ಚಂದ್ರಶೇಖರ್, ಯುವ ವೇದಿಕೆ ಅಧ್ಯಕ್ಷರಾದ ಎಂ.ಡಿ. ಕೃಷ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ಪ್ರಮುಖರಾದ ಎಂ.ಡಿ. ರಂಗಸ್ವಾಮಿ, ಹೆಚ್.ಎನ್. ರಾಮಚಂದ್ರ, ವಿ.ಡಿ. ಪುಂಡರೀಕಾಕ್ಷ, ಜೈರಾಜ್, ಕಿರಣ್ ಮತ್ತಿತರರು ಇದ್ದರು.