ಮಡಿಕೇರಿ,ಅ. 3 : ಕೊಡವ ಸಮಾಜಗಳ ಒಕ್ಕೂಟದ 6ನೇ ವರ್ಷದ ಕೊಡವ ನಮ್ಮೆಯು ತಾ.26, 27 ಮತ್ತು 28 ರಂದು ಬಾಳುಗೋಡಿನಲ್ಲಿ ನಡೆಯಲಿದ್ದು, ಕ್ರೀಡಾಕೂಟ ಸಮಿತಿಯ ಪೂರ್ವ ಭಾವಿ ಸಭೆಯು ಇಂದು ಬಾಳುಗೋಡಿನಲ್ಲಿ ನಡೆಯಿತು.

ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಈ. ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಕಿ, ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆಯುವ ಸ್ಪರ್ಧೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ತಾ.14ರೊಳಗೆ ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರು ತಮ್ಮ ತಂಡದ ಭಾಗವಹಿಸುವಿಕೆ ಮತ್ತು ತಂಡದ ಆಟಗಾರರ ಪಟ್ಟಿಯನ್ನು 2000 ರೂ.ಪ್ರವೇಶ ಶುಲ್ಕದೊಂದಿಗೆ ಅಧ್ಯಕ್ಷರು, ಕ್ರೀಡಾ ಸಮಿತಿ, ಕೊಡವ ಸಮಾಜಗಳ ಒಕ್ಕೂಟ ಬಾಳುಗೋಡು, ವೀರಾಜಪೇಟೆ ಇವರಿಗೆ ತಲುಪಿಸುವಂತೆ ತೀರ್ಮಾನಿಸಲಾಯಿತು. ಪಾವತಿಸಿಕೊಂಡ ಪ್ರವೇಶ ಶುಲ್ಕ 2000 ರೂ.ವನ್ನು ಕ್ರೀಡಾಕೂಟಕ್ಕೆ ಬಂದು ಆಡಿದ ತಂಡಕ್ಕೆ ಮರುಪಾವತಿಸಲಾಗುವದು, ಗೈರು ಹಾಜರಾಗುವ ತಂಡಗಳ ಪ್ರವೇಶ ಶುಲ್ಕವನ್ನು ನೀಡಲಾಗುವದಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಯಿತು.

ಹಾಕಿ ಪಂದ್ಯಾಟದ ಅಂತಿಮ ಪಂದ್ಯಾವಳಿಯನ್ನು ಅ.28 ರಂದು ಮದ್ಯಾಹ್ನ 2 ಗಂಟೆಗೆ ನಡೆಸುವಂತೆ ತೀರ್ಮಾನಿಸಲಾಯಿತು, ಹೆಚ್ಚಿನ ಮಾಹಿತಿಗೆ ಕಂಬಿರಂಡ ಕಿಟ್ಟು ಕಾಳಪ್ಪ : (94486 47273), ಬೊಳ್ಳಿಯಂಗಡ ದಾದು ಪೂವಯ್ಯ: (9448504053), ಕೋಟೇರ ರಘು ಕಾರ್ಯಪ್ಪ: (9108543474), ಮಣವಟ್ಟಿರ ಈ ಚಿಣ್ಣಪ್ಪ : (944821705) ನ್ನು ಸಂಪರ್ಕಿಸಬಹುದು. ಕಂಬಿರಂಡ ಕಿಟ್ಟು ಕಾಳಪ್ಪ ಸ್ವಾಗತಿಸಿ, ಕೋಟೇರ ರಘು ಕಾರ್ಯಪ್ಪ ಕಳೆದ ವರ್ಷದ ಲೆಕ್ಕಪತ್ರ ಮಂಡಿಸಿದರು. ಬೊಳ್ಳಿಯಂಗಡ ದಾದು ಪೂವಯ್ಯ ವಂದಿಸಿದರು.

ಸಭೆಯಲ್ಲಿ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ, ಕ್ರೀಡಾ ಸಮಿತಿಯ ನಿರ್ದೇಶಕ ಕಾಟುಮಣಿಯಂಡ ಉಮೇಶ್, ಕನ್ನಂಬಿರ ಚಿನ್ನಪ್ಪ, ಮಾದೇಟಿರ ಸಂಪಿ ಪೂಣಚ್ಚ, ತಂಬುಕುತ್ತಿರ ಮಧು ಮಂದಣ್ಣ, ಬೊಳ್ಳಜಿರ ಅಯ್ಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.