ಸುಂಟಿಕೊಪ್ಪ, ಅ. 4: ಸಮಾಜದಲ್ಲಿ ಭ್ರಾತೃತ್ವದ, ಬಾಂಧವ್ಯದ ಕೊರತೆ ಕಾಣುತ್ತಿದೆ ಎಲ್ಲರೂ ಪ್ರೀತಿಯಿಂದ ಒಂದಾಗಿ ಬಾಳಿದರೆ ಸಮಾಜ, ದೇಶ ಅಭಿವೃದ್ಧಿಯಾಗಲಿದೆ ಎಂದು ಹಾಸನ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಎ. ಲೋಕೇಶ್ ಕುಮಾರ್ ಹೇಳಿದರು.

ಇಲ್ಲಿನ ಹಿಂದೂ ಮಲೆಯಾಳಿ ಸಮಾಜದ 11ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಓಣಂ ಆಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲೇ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪರಿಪಾಲಿಸುತ್ತಿದ್ದಾರೆ. ಸಮಾನತೆಯನ್ನು ಪ್ರತಿಪಾದಿಸಿದ ಅಸ್ಪøಶ್ಯತೆ ನಿರ್ಮೂಲ ನೆಗೆ ಅವರೇ ಕಾರಣೀ ಭೂತರಾಗಿದ್ದರು. ಯಾವದೇ ಸಂಘಟನೆ ಸಂಕುಚಿತ ಮನೋಭಾವನೆ ಇಟ್ಟುಕೊಳ್ಳದೆ ಸಮಾಜಮುಖಿ ಸೇವೆ ಯಲ್ಲಿ ತೊಡಗಿಸಿಕೊಳ್ಳುವಂತಾಗ ಬೇಕೆಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಲೆಯಾಳಿ ಸಮಾಜದವರು ತಮ್ಮ ಸಂಸ್ಕøತಿ ಆಚಾರ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅನುಸರಿಸಿಕೊಂಡು ಇಲ್ಲಿನ ಮೂಲನಿವಾಸಿಗಳೊಂದಿಗೆ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸಂಘಟನೆಯವರು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ, ಬಡವರಿಗೆ ಸಹಾಯಹಸ್ತ ನೀಡುತ್ತಾ ಅವರನ್ನು ಮುಖ್ಯವಾಹಿನಿಗೆ ತರುವಂತಾಗಬೇಕು, ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಳ್ಳಬೇಕೆಂದರು.

ಮಾಜಿ ಜಿ.ಪಂ. ಅಧ್ಯಕ್ಷರೂ ಮಲೆಯಾಳಿ ಸಮಾಜದ ಸಲಹೆಗಾರ ವಿ.ಎಂ. ವಿಜಯ ಮಾತನಾಡಿ, ಪೋಷಕರು ಮಕ್ಕಳಿಗೆ ವಿದ್ಯೆ ಕೊಡುವ ಮೂಲಕ ಅವರ ವಿದ್ಯೆ ಪ್ರಗತಿ ಪರಿಶೀಲಿಸಬೇಕು. ಮಕ್ಕಳು ಉತ್ತಮ ಪ್ರಜೆಗಳಾಗಿರಲು ತಂದೆ ತಾಯಿಯ ಪಾತ್ರ ಪ್ರಮುಖವಾದದ್ದು, ವಿದ್ಯೆಯಿಂದ ಮಕ್ಕಳಿಗೆ ಸಂಸ್ಕಾರ ಮೂಡಲಿದ್ದು ಬುದ್ಧಿ ಸದ್ಗುಣಗಳನ್ನು ಪೋಷಕರು ಹೇಳಿಕೊಡಬೇಕೆಂದರು.

ಮಾಜಿ ತಾ.ಪಂ. ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ನಾರಾಯಣ ಗುರುಗಳು ಸಂಘಟನೆಯಿಂದ ಸಶಕ್ತರಾಗಿ ವಿದ್ಯೆಯಿಂದ ಪ್ರಬುದ್ಧರಾಗಿ ಎಂದು ಬೋಧಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಮಕ್ಕಳಿಗೆ ಅಗತ್ಯವಾಗಿ ಕೊಡಬೇಕು ಹಾಗೆಯೇ ಕಷ್ಟಪಟ್ಟು ಸಿರಿವಂತರಾಗಲು ಸಮಾಜ ಬಾಂಧವರು ಪಣತೊಡಬೇಕು ಎಂದರು.

ಚೆಟ್ಟಳ್ಳಿ ಮಲೆಯಾಳಿ ಸಮಾಜದ ಅಧ್ಯಕ್ಷ ಶಶಿಕುಮಾರ್, ಇತ್ತೀಚೆಗೆ 1 ವರ್ಷದಲ್ಲಿ ಮಲೆಯಾಳಿ ಸಮಾಜದ ಇಬ್ಬರು ಹತ್ಯೆಯಾಗಿದ್ದು, ಓರ್ವರು ಕಾಡಾನೆ ಧಾಳಿಯಿಂದ ಸಾವನ್ನಪ್ಪಿದ ಆ ಕುಟುಂಬದವರ ನೆರವಿಗೆ ಸಮಾಜ ಮುಂದಾಗಬೇಕೆಂದರು.

ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬ್ಯಾಂಕ್‍ನ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಸಿದ್ದಾಪುರ ಕೈರಳಿ ಸಮಾಜದ ಅಧ್ಯಕ್ಷ ಸೋಮವಾರಪೇಟೆ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್, ಮರಗೋಡು ಮಲೆಯಾಳಿ ಸಮಾಜದ ಅಧ್ಯಕ್ಷ ಬಾಲಕೃಷ್ಣ, ಸುಂಟಿಕೊಪ್ಪ ಮಲೆಯಾಳಿ ಸಮಾಜದ ಗೌರವ ಅಧ್ಯಕ್ಷ ಭಾಸ್ಕರನ್, ಉಪಾಧ್ಯಕ್ಷರುಗಳಾದ ವಿ.ಕೆ. ಪ್ರಕಾಶ್, ರಮೇಶ್‍ಪಿಳ್ಳೆ, ಗ್ರಾ.ಪಂ. ಸದಸ್ಯ ಜೆ.ಜೆ. ಹೇಮಂತ್ ವರ್ಕ್‍ಶಾಪ್ ಸಂಘದ ಅಧ್ಯಕ್ಷ ಸಂತೋಷ್ ವೇದಿಕೆಯಲ್ಲಿದ್ದರು.

ಸುಂಟಿಕೊಪ್ಪ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಸಿ. ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ ಎಸ್‍ಎಲ್‍ಸಿ ವಿದ್ಯಾರ್ಥಿಗಳಾದ ವಿನೀಶ್, ಹರೀಶ್ ಹಾಗೂ ಅಮೃತ ಚಂದನ್ ದ್ವಿತೀಯ ಪಿಯುಸಿಯಲ್ಲಿ ಸುಚಿತ್ರಾ ಸಂತೋಷ್ ಹಾಗೂ ಸಿನಿಯ ಮೋಹನ್ ಇವರುಗಳನ್ನು ಪುರಸ್ಕರಿಸಿ ಪ್ರೋತ್ಸಾಹಧನ ವಿತರಿಸಲಾಯಿತು. ಮಕ್ಕಳಿಗೆ ಪೂಕಳಂ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಾಜದ ಹಿರಿಯ ನಾಗರಿಕರಾದ ಕೊಡಗರಹಳ್ಳಿಯ ಸಹದೇವ, ಕಲ್ಯಾಣಮ್ಮ ಲಕ್ಷ್ಮಮ್ಮ ಹಾಗೂ ಕೆ. ಕಣ್ಣನ್ ಅವರನ್ನು ಸನ್ಮಾನಿಸಲಾಯಿತು.

ವರ್ಷಚಂದ್ರ ಶೇಖರ್ ಪ್ರಾರ್ಥಿಸಿ, ಶೀತಲ್ ಚೇತನ್ ಸ್ವಾಗತಿಸಿ ನಿರೂಪಿಸಿ, ಶಿವಮಣಿ ವಂದಿಸಿದರು.