ಕುಶಾಲನಗರ, ಅ. 4: ಶೌಚಾಲಯದ ಗುಂಡಿಗೆ ಬಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಹಸುವೊಂದನ್ನು ಸ್ಥಳೀಯರು ಮೇಲೆತ್ತಿ ರಕ್ಷಿಸಿ ಮಾನವೀಯತೆ ಮೆರೆದ ಘಟನೆಯೊಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಬಳಿ ನಡೆದಿದೆ.

ಅಲ್ಲಿನ ಕೃಷಿ ಇಲಾಖೆಗೆ ಸೇರಿದ ವಸತಿ ನಿಲಯದ ಹಿಂದೆ ಮೇಯುತ್ತಿದ್ದ ಹಸು ಗುಂಡಿಗೆ ಬಿದ್ದು ಎರಡು ದಿನಗಳಾದರೂ ಮೇಲೆ ಬರಲು ಆಗುತ್ತಿರಲಿಲ್ಲ. ಇದನ್ನು ಕಂಡ ತಾಲೂಕು ಪಂಚಾಯಿಯಿ ಸದಸ್ಯ ಗಣೇಶ್ ಮತ್ತು ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಹಸುವನ್ನು ಮೇಲೆತ್ತಲು ಹರಸಾಹಸ ಪಟ್ಟು ಕೊನೆಗೂ ಜೀವಂತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥಗೊಂಡಿದ್ದ ಹಸುವಿಗೆ ಆರೈಕೆ ಮಾಡಿ ನಂತರ ಚಿಕಿತ್ಸೆ ನೀಡಲು ಕ್ರಮಕೈಗೊಂಡರು.

ಈ ಕಾರ್ಯದಲ್ಲಿ ಸ್ಥಳೀಯ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಂಜುನಾಥ್ ಗುರುಲಿಂಗಪ್ಪ, ಯುವ ಮೋರ್ಚಾ ಅಧ್ಯಕ್ಷ ಶಶಿಕಿರಣ್ ಮತ್ತಿತರರು ಕೈಜೋಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂತಹ ಅಪಾಯಕಾರಿ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.