ಮಡಿಕೇರಿ, ಅ. 5: ಗೋಣಿಕೊಪ್ಪಲು ಕಾವೇರಿ ಮಹಿಳಾ ಸಮಾಜದ ಗೌರವಕ್ಕೆ ಧಕ್ಕೆ ತರಲು ಹಿಂದಿನ ಅಧ್ಯಕ್ಷರು ಪ್ರಯತ್ನಿಸುತ್ತಿದ್ದಾರೆಂದು ನೂತನ ಅಧ್ಯಕ್ಷೆ ಕಟ್ಟೆರ ಉತ್ತರೆ ಹಾಗೂ ಕಾರ್ಯದರ್ಶಿ ಬೋಜಮ್ಮ ಉತ್ತಪ್ಪ ಆರೋಪಿಸಿದ್ದಾರೆ.

ತಾ. 5ರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇವರುಗಳು ಸೆ. 16ರಂದು ಹೊಸ ಆಡಳಿತ ಮಂಡಳಿ ರಚನೆಗೊಂಡಿದ್ದು, ನಂತರದ ಸಭೆಯಲ್ಲಿ ಹಿಂದಿನ ಅಧ್ಯಕ್ಷರು ಎಲ್ಲ ಲೆಕ್ಕ ಪತ್ರಗಳನ್ನು 1 ವಾರದೊಳಗೆ ನೀಡುವಂತೆ ನೋಟೀಸ್ ಕಳುಹಿಸಿದ್ದರೂ ಪ್ರತಿಕ್ರಿಯಿಸಿಲ್ಲವೆಂದಿದ್ದಾರೆ.

ಸಮಾಜದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ದರ ನಿಗದಿ ಮಾಡಿದ್ದು, ಮಂಜುನಾಥ ಎಂಬವರಿಗೆ ನಾಮಕರಣ ಕಾರ್ಯಕ್ರಮಕ್ಕೆ 2500 ಬಾಡಿಗೆ ಬದಲು ಹಿಂದಿನ ಅಧ್ಯಕ್ಷರು ಕೇವಲ 650 ರೂಪಾಯಿಗೆ ರಶೀತಿ ನೀಡಿದ್ದು, ಅದನ್ನು ಮಂಜುನಾತ ಅವರ ಗಮನಕ್ಕೆ ಹೊಸ ಆಡಳಿತ ಮಂಡಳಿ ತಂದ ಬಳಿಕ ಅವರು ಅರ್ಥೈಸಿಕೊಂಡು ನಿರ್ಗಮಿಸಿರುವದಾಗಿ ವಿವರಿಸಿದ್ದಾರೆ.

ಮಾಜೀ ಅಧ್ಯಕ್ಷೆ ಸುಮಿ ಸುಬ್ಬಯ್ಯ ಅವರು ಇದುವರೆಗೂ ಹಿಂದಿನ ಲೆಕ್ಕಪತ್ರ, ರಶೀತಿ ಪುಸ್ತಕಗಳನ್ನು ಹಿಂದಿರುಗಿಸದೇ ಇದೀಗ ಸಮಾಜದ ಘನತೆಗೆ ಧಕ್ಕೆ ತರುವ ರೀತಿ ವರ್ತಿಸುತ್ತಿದ್ದಾರೆಂದು ಪ್ರತಿಕ್ರಿಯಿಸಿದ್ದಾರೆ.