ಸುಂಟಿಕೊಪ್ಪ, ಅ. 6: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಹಾಗೂ ಮೊದೂರು ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ಯೋಜನೆಯಡಿ 25 ಲಕ್ಷ ರೂ. ಬಿಡುಗಡೆಯಾಗಿದ್ದು ಭೂಮಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ನೆರವೇರಿಸಿದರು. ಕುಡಿಯುವ ನೀರು, ಸೋಲಾರ್ ದೀಪ ಅಳವಡಿಕೆ. ಚರಂಡಿ ನಿರ್ಮಾಣ. ಮರು ಡಾಮರೀಕರಣ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಈ ಹಣವನ್ನು ಬಳಸ ಬಹುದಾಗಿದೆ. ಮುಂದಿನ ದಿನಗಳಲ್ಲಿ ಕೆದಕಲ್‍ನಿಂದ ಕಂಬಿಬಾಣೆವರೆಗೆ 10 ಕಿ.ಮೀ. ರಸ್ತೆಯನ್ನು ಲೋಕೋಪಯೊಗಿ ಇಲಾಖೆ ಮೂಲಕ ಅಭಿವೃದ್ಧಿ ಪಡಿಸಲು ಕ್ರಮ ಕೈ ಗೊಳ್ಳಲಾಗುವದು.

(ಮೊದಲ ಪುಟದಿಂದ) ಗ್ರಾಮದಲ್ಲಿ ತೆರೆದ ಬಾವಿ ನಿರ್ಮಿಸಲಾಗುವದು ಅಲ್ಲದೆ ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿ ನಡೆಸಲಾಗುವದೆಂದು ಚಂದ್ರಕಲಾ ಹೇಳಿದರು. ಮುಖ್ಯ ಮಂತ್ರಿ ನಿಧಿಯಿಂದ 15 ಲಕ್ಷ, ಗ್ರಾಮ ಪಂಚಾಯಿತಿ ನಿಧಿಯಿಂದ 1 ಲಕ್ಷ, ಜಿಲ್ಲಾ ಪಂಚಾಯಿತಿ ನಿಂದ 3.5 ಲಕ್ಷ, ಉದ್ಯೋಗ ಖಾತ್ರಿ ಯೋಜನೆಯಲ್ಲಿ 3 ಲಕ್ಷ, 14ನೇ ಹಣಕಾಸು ಯೋಜನೆಯಿಂದ 2.5 ಲಕ್ಷ ಬಿಡುಗಡೆಯಾಗಿದೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ದೇವಿಪ್ರಸಾದ್ ಕಾಯರ್‍ಮಾರ್ ಮಾತನಾಡಿ ಮೋದೂರು, ಹೊರೂರು ವಿಭಾಗದಲ್ಲಿ 10 ವರ್ಷದಿಂದ ಎಂಎಲ್‍ಸಿ. ಎಂಎಲ್‍ಎ ನಿಧಿಯಿಂದ ಚಿಕ್ಕಾಸು ಹಣ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಾಗಿಲ್ಲ. ಉದ್ಯೋಗ ಖಾತ್ರಿ ಯೋಜನೆಯಿಂದ 3 ವರ್ಷದಿಂದ ಈ ವಿಭಾಗದಲ್ಲಿ ಕಾಮಗಾರಿ ಸ್ವಲ್ಪಮಟ್ಟಿಗೆ ಆಗಿದೆ ಎಂದು ಹೇಳಿದರು. ಈ ಸಂದರ್ಭ ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಎ. ಬಾಲಕೃಷ್ಣ ರೈ, ಉಪಾದ್ಯಕ್ಷೆ ಲೀಲಾ, ಸದಸ್ಯರುಗಳಾದ ಹರಿಣಿ, ಮಾಜಿ ಅದ್ಯಕ್ಷ ವಿ.ಎ.ಕರುಂಬಯ್ಯ ಪಿಡಿಓ ವೀಣಾ, ಪಂಚಾಯಿತಿ ಸಿಬ್ಬಂದಿ ರಾಮಚಂದ್ರ, ಗುತ್ತಿಗೆದಾರ ಸುರೇಶ್ ಕುಮಾರ್, ಇಬ್ರಾಹಿಂ, ಗ್ರಾಮಸ್ಥರು ಹಾಜರಿದ್ದರು.