ಸೋಮವಾರಪೇಟೆ, ಅ. 11: ಕೇಂದ್ರ ಸರ್ಕಾರದಿಂದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ಸೋಮವಾರಪೇಟೆ ವಿದ್ಯುತ್ ಉಪ ವಿಭಾಗದ ಸೋಮವಾರಪೇಟೆ ಪಟ್ಟಣದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 11.80 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.

ಪಟ್ಟಣಕ್ಕೆ ಸಮೀಪದ ಹಾನಗಲ್ಲು ಬಾಣೆಯಲ್ಲಿ ಕಾಯ್ದಿರಿಸಿರುವ ಜಾಗದಲ್ಲಿ ರೂ. 3.80 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಪ ವಿಭಾಗದ ಕಚೇರಿ, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಮತ್ತು 66 ಕೆ.ವಿ. ವಿದ್ಯುತ್ ಪ್ರಸರಣಾ ಕೇಂದ್ರ ಸ್ಥಾಪನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿಯೇ ವಿದ್ಯುತ್ ಕೊರತೆಯನ್ನು ನೀಗಿಸ ಲಾಗಿದೆ. ಕೃತಕ ವಿದ್ಯುತ್ ಅಭಾವವನ್ನು ತಪ್ಪಿಸಿ ಬೇಡಿಕೆಗಿಂತಲೂ ಅಧಿಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರೊಂದಿಗೆ ವಿದ್ಯುತ್ ಬಿಲ್‍ನಲ್ಲೂ ಇಳಿಕೆ ಮಾಡಲಾಗಿದೆ ಎಂದು ಸಂಸದರು ತಿಳಿಸಿದರು.

ಕೇಂದ್ರ ಸರ್ಕಾರ ಪುರಸ್ಕøತ ಸಮಗ್ರ ವಿದ್ಯುತ್

(ಮೊದಲ ಪುಟದಿಂದ) ಅಭಿವೃದ್ಧಿ ಯೋಜನೆಯಡಿ ಸೋಮವಾರಪೇಟೆ ವಿಭಾಗಕ್ಕೆ ಒಳಪಟ್ಟಂತೆ 60 ಟ್ರಾನ್ಸ್‍ಫಾರ್ಮರ್ ಸೆಂಟರ್‍ಗಳು, ಇನ್ಸುಲೇಟೆಡ್ ಕೇಬಲ್‍ಗಳ ಅಳವಡಿಕೆ, ವಿದ್ಯುತ್ ವಾಹಕಗಳ ಸಾಮಥ್ರ್ಯ ವೃದ್ಧಿ, ಪವರ್ ಸ್ಟೇಷನ್‍ಗಳ ನವೀಕರಣ ಮತ್ತು ಅಭಿವೃದ್ಧಿಗೆ 8 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಇದರೊಂದಿಗೆ ಹಾನಗಲ್ಲು ಬಾಣೆಯಲ್ಲಿ ನೂತನ ಪವರ್ ಸ್ಟೇಷನ್ ನಿರ್ಮಾಣ ಮತ್ತು ಉಪ ವಿಭಾಗದ ಕಚೇರಿ ಕಟ್ಟಡ ನಿರ್ಮಾಣಕ್ಕೆ 3.80 ಕೋಟಿ ಸೇರಿದಂತೆ ಒಟ್ಟು 11.80 ಕೋಟಿ ಅನುದಾನ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಮುಕ್ತಾಯ ಗೊಳಿಸುವಂತೆ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದರು.

ಇದರ ಜತೆಗೆ ಕುಶಾಲನಗರಕ್ಕೆ 3.80 ಕೋಟಿ, ವೀರಾಜಪೇಟೆಗೆ 5.50 ಕೋಟಿ ಅನುದಾನ ನೀಡಲಾಗಿದೆ. ಒಟ್ಟಾರೆ ಕೊಡಗು ಜಿಲ್ಲೆಯ ವಿದ್ಯುತ್ ಸಮಸ್ಯೆ ನಿವಾರಣೆಗೆ 150 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ಕಾಣುತ್ತಿದ್ದು, ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯತೆ ಇದೆ ಎಂದರು.

ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸದಸ್ಯೆ ಹೆಚ್.ಎನ್. ತಂಗಮ್ಮ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್, ಸದಸ್ಯ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿದ್ಯುತ್ ಇಲಾಖೆಯ ಅಧೀಕ್ಷಕ ಇಂಜಿನಿಯರ್ ರಾಮಚಂದ್ರ, ಕಾರ್ಯನಿರ್ವಾಹಕ ಅಭಿಯಂತರ ಸೋಮಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನೀಲಶೆಟ್ಟಿ, ಸಹಾಯಕ ಇಂಜಿನಿಯರ್ ದಯಾನಂದ್, ಕಿರಿಯ ಅಭಿಯಂತರ ಮನುಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು.