ಕುಶಾಲನಗರ, ಅ. 11: ಕುಶಾಲನಗರದ ಯುವಕನೊಬ್ಬನ ಮೇಲೆ ಪಿರಿಯಾಪಟ್ಟಣದಲ್ಲಿ ಮಾರಣಾಂತಿಕ ಹಲ್ಲೆ ನಡೆದ ಘಟನೆ ಇತ್ತೀಚೆಗೆ ನಡೆದಿದೆ. ತೀವ್ರ ಸ್ವರೂಪದ ಗಾಯಗಳೊಂದಿಗೆ ಕುಶಾಲನಗರದ ಇಂದಿರಾ ಬಡಾವಣೆಯ ನಿವಾಸಿ ಶ್ರೀಧರ್ (26) ಎಂಬಾತ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದಾನೆ.

ಈ ತಿಂಗಳ 6 ರಂದು ಸಂಜೆ ಪಿರಿಯಾಪಟ್ಟಣಕ್ಕೆ ಬೈಕ್‍ನಲ್ಲಿ ತೆರಳಿದ ಶ್ರೀಧರ್‍ಗೆ ಪಿರಿಯಾಪಟ್ಟಣ ಗೋಣಿಕೊಪ್ಪ ರಸ್ತೆ ನಡುವೆ ಅಪಘಾತ ಉಂಟಾಗಿದೆ ಎನ್ನಲಾಗಿದ್ದು ಮೇಲ್ನೋಟಕ್ಕೆ ಇದು ಕೊಲೆಯತ್ನ ಎಂದು ಗಾಯಾಳುವಿನ ಸಹೋದರ ಗಣೇಶ್ ಪಿರಿಯಾಪಟ್ಟಣ ಪೊಲೀಸರಿಗೆ ದೂರಿದ್ದಾರೆ.

ಶ್ರೀಧರ್ ಕುಶಾಲನಗರದಲ್ಲಿ ಕೂಲಿ ಕಾರ್ಮಿಕನಾಗಿದ್ದು ದಿನಾಂಕ 6 ರಂದು ಸಂಜೆ ಅತ್ತ ಕಡೆಯಿಂದ ಬಂದ ಕರೆ ಹಿನ್ನೆಲೆಯಲ್ಲಿ ತನ್ನ ಬೈಕ್‍ನಲ್ಲಿ ಪಿರಿಯಾಪಟ್ಟಣಕ್ಕೆ ತೆರಳಿದ್ದಾನೆ. ಈ ಸಂದರ್ಭ ಪಿರಿಯಾಪಟ್ಟಣ ಗೋಣಿಕೊಪ್ಪ ರಸ್ತೆಯಲ್ಲಿ ತೀವ್ರ ಏಟಾಗಿ ರಸ್ತೆಯಲ್ಲಿ ಬಿದ್ದ ದೃಶ್ಯ ಕಂಡು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿರುವ ಗಣೇಶ್, ಈ ಪ್ರಕರಣ ಪೂರ್ವಯೋಜಿತವಾಗಿ ರುವದಾಗಿ ಸಂಶಯ ವ್ಯಕ್ತಪಡಿಸಿದ್ದಾರೆ. ತನ್ನ ತಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಅಪರಿಚಿತರು ತೀವ್ರ ಹಲ್ಲೆ ನಡೆಸಿರುವ ಶಂಕೆ ಇದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಪಿರಿಯಾಪಟ್ಟಣ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ಗಾಯಾಳು ಶ್ರೀಧರ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಗಣೇಶ್ ಮಾಹಿತಿ ನೀಡಿದ್ದಾರೆ.