ಶನಿವಾರಸಂತೆ, ಅ. 11: ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ನಾಲ್ವರು ಆರೋಪಿಗಳು ಮಾವಿನ ಮರ ಕಡಿದು ಸಾಗಿಸಿದ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದೊಡ್ಡಳ್ಳಿ ಗ್ರಾಮದ ರುದ್ರಯ್ಯ ಅವರ ಪತ್ನಿ ಗೌರಮ್ಮ ಅವರಿಗೆ ಸರಕಾರದಿಂದ ಜಾಗ ಮಂಜೂರಾಗಿತ್ತು. ಆ ಜಾಗದಲ್ಲಿ ಕಾಫಿ, ಮೆಣಸು, ಸಿಲ್ವರ್, ಮಾವು, ಮರಗಳನ್ನು ಬೆಳೆದಿದ್ದರು. ಈ ತೋಟದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚೌಡೇನಹಳ್ಳಿಯ ಸಿ.ಸಿ. ತೋಟಪ್ಪ, ಹಾರೆಹೊಸೂರು ಗ್ರಾಮದ ಚಂದ್ರಶೇಖರ್, ಚೌಡೇನಹಳ್ಳಿಯ ಸಿ.ಡಿ. ಯತೀಶ್ ಹಾಗೂ ಹಾರೆಹೊಸೂರು ಗ್ರಾಮದ ಹೆಚ್.ಆರ್. ಗಿರೀಶ್ ಅವರು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಮಾವಿನ ಮರವನ್ನು ಕಡಿದು ಸಾಗಿಸಿದ್ದರು. ಈ ಬಗ್ಗೆ ದೊರೆತ ದೂರಿನ ಮೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರಸಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಮರ ಸಾಗಾಟಕ್ಕೆ ಬಳಸಿದ್ದ ಟ್ರ್ಯಾಕ್ಟರ್ (ಕೆಎ-12, ಟಿ-7459), ಕತ್ತಿ, ಗರಗಸ, ಕೊಡ್ಲಿಯನ್ನು ವಶಪಡಿಸಿಕೊಂಡು ತಾ. 7 ರಂದು ನಾಲ್ವರು ಆರೋಪಿಗಳನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.