ಮಡಿಕೇರಿ, ಅ. 12: ತಾನು ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಇರುವದನ್ನು ಸಹಿಸದ ಬಿಜೆಪಿಯ ಕೆಲವು ಸದಸ್ಯರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದು ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಆರೋಪಿಸಿದ್ದಾರೆ.ರಾಜೀನಾಮೆಗೆ ಆಗ್ರಹಿಸಿರುವ ಬಿಜೆಪಿ ಸದಸ್ಯರ ಆರೋಪ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ನಗರಸಭಾ ಅಧ್ಯಕ್ಷಳಾದ ನಂತರ ನಿಯಮ ಬಾಹಿರ ಕೆಲಸಗಳಿಗೆ ಮತ್ತು ಭ್ರಷ್ಟಾಚಾರ ವ್ಯವಸ್ಥೆಗೆ ಕಡಿವಾಣ ಬಿದ್ದಿದೆ. (ಮೊದಲ ಪುಟದಿಂದ) ಇದನ್ನು ಸಹಿಸದ ಉಪಾಧ್ಯಕ್ಷರು ಹಾಗೂ ಕೆಲವು ಸದಸ್ಯರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವದಕ್ಕೆ ತಾಂತ್ರಿಕ ಅಡಚಣೆಗಳು ಕಾರಣವಾಗಿವೆ. ಸರ್ಕಾರದ ಮಾರ್ಗಸೂಚಿ ಮತ್ತು ಮೀಸಲು ನೀತಿ ಆದೇಶ ಇದಕ್ಕೆ ಸಾಕ್ಷಿಯಾಗಿದೆ ಹೊರತು ನನ್ನ ಸಹಿ ಕಾರಣವಲ್ಲವೆಂದು ಕಾವೇರಮ್ಮ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಟೆಂಡರ್ ಕರೆಯಲಾಗು ವದು ಎಂದು ತಿಳಿಸಿದ್ದಾರೆ. ಬಿಜೆಪಿ ಪ್ರಮುಖರು ಅಭಿವೃದ್ಧಿ ಕೆಲಸ ಸಂಬಂಧ ಉಪಾಧ್ಯಕ್ಷರು ಸಹಿ ಮಾಡಿದ್ದಾರೆ. ಅಧ್ಯಕ್ಷರು ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಮಾತ್ರ ಉಪಾಧ್ಯಕ್ಷರು ಸಹಿ ಮಾಡಬಹುದು ಹೊರತು ಅಧ್ಯಕ್ಷರ ಉಪಸ್ಥಿತಿಯಲ್ಲಿ ಅಲ್ಲ ಎನ್ನುವ ಕನಿಷ್ಠ ಜ್ಞಾನ ಕೂಡ ಸದಸ್ಯರಿಗೆ ಇಲ್ಲವೆಂದು ಕಾವೇರಮ್ಮ ಟೀಕಿಸಿದ್ದಾರೆ.

ಯುಜಿಡಿ ಕಾಮಗಾರಿ ನೇರವಾಗಿ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀನದಲ್ಲಿ ನಡೆಯುತ್ತಿದ್ದು, ಈ ಯೋಜನೆ ಕೇಂದ್ರ ಸರ್ಕಾರದ ಕಡ್ಡಾಯವಾಗಿ ಜಾರಿ ಯಾಗಬೇಕಾದ ಯೋಜನೆಯಾಗಿದೆ. ಈಗ ಆರೋಪ ಮಾಡುತ್ತಿರುವ ಸದಸ್ಯರುಗಳೇ ಹಿಂದೆ ಒಪ್ಪಿಗೆ ಸೂಚಿಸುವಾಗಲೂ ನಗರಸಭಾ ಸದಸ್ಯರಾಗಿದ್ದರು. ಆದರೆ ಇದೀಗ ಜನರ ಹಾದಿ ತಪ್ಪಿಸುವ ಉದ್ದೇಶದಿಂದ ಆರೋಪ ಮಾಡಲಾಗುತ್ತಿದೆ ಎಂದರು.

ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಿ 6 ತಿಂಗಳು ಕಳೆದಿದ್ದು, ಮೂರು ತಿಂಗಳುಗಳ ಕಾಲ ಎಡೆಬಿಡದೆ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವದು ಸಾಧ್ಯವಿಲ್ಲ ಎನ್ನುವ ಮಾಹಿತಿ ಎಲ್ಲರಿಗೂ ಇದೆ ಎಂದು ಸಮರ್ಥಿಸಿ ಕೊಂಡ ಅವರು, ಡಿಸೆಂಬರ್ ಅಂತ್ಯದಲ್ಲಿ ಖಾಸಗಿ ಬಸ್ ನಿಲ್ದಾಣ ಯೋಜನೆ ಪೂರ್ಣಗೊಳ್ಳಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಚ್ಛತೆಯಲ್ಲಿ ಮಡಿಕೇರಿ ನಗರ ಕರ್ನಾಟಕ ರಾಜ್ಯದಲ್ಲೇ 4ನೇ ಸ್ಥಾನದಲ್ಲಿದೆ. ಹೀಗಿರುವಾಗ ನಗರ ಅಶುಚಿತ್ವದಿಂದ ಕೂಡಿದೆ ಎಂದು ಬಿಜೆಪಿ ಸದಸ್ಯರು ಮಾಡುತ್ತಿರುವ ಆರೋಪದ ಹಿಂದೆ ದುರುದ್ದೇಶ ಅಡಗಿದೆ ಎಂದು ಅವರು ಆರೋಪಿಸಿದರು.