ಮಡಿಕೇರಿ, ಅ. 12: ಅರೆಭಾಷೆ ಗೌಡ ಸಂಘ, ಐಗೂರು ಮತ್ತು ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಾಲ್ಕನೇ ವರ್ಷದ ಕೈಲ್ ಮುಹೂರ್ತ ಸಂತೋಷ ಕೂಟವನ್ನು ಯಡವಾರೆ ಶಾಲಾ ಮೈದಾನದಲ್ಲಿ ನಿವೃತ್ತ ಗ್ರಾ.ಪಂ. ಅಧಿಕಾರಿ ಚೆರಿಯಮನೆ ಎಂ. ರಾಮಪ್ಪ ಉದ್ಘಾಟಿಸಿದರು.

ಸಂತೋಷ ಕೂಟ ಪ್ರಯುಕ್ತ ಗೌಡ ಜನಾಂಗ ಬಾಂಧವರಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಹಗ್ಗಜಗ್ಗಾಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಾರೋಪ: ಆಟೋಟ ಕಾರ್ಯಕ್ರಮದ ಬಳಿಕ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅರೆಭಾಷೆ ಗೌಡ ಸಂಘದ ಅಧ್ಯಕ್ಷ ತೊತ್ತಿಯನ ಕೇಶವಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೌರವ ಅಧ್ಯಕ್ಷ ಪೊನ್ನಚ್ಚನ ಕೆ. ಗಣಪತಿ, ಕೊಡಗು ಗೌಡ ಯುವ ವೇದಿಕೆ ಉಪಾಧ್ಯಕ್ಷ ಪಾಣತ್ತಲೆ ಜಗದೀಶ ಮಂದಪ್ಪ ಉಪಸ್ಥಿತರಿದ್ದರು. ಕಾಳೇರಮ್ಮನ ಸಾವಿತ್ರಿ ಮತ್ತು ಪಾಲಾಕ್ಷ ಅವರು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿದರು.

ಸಮಾರಂಭದಲ್ಲಿ ಕಾಜೂರು ದೂರವಾಣಿ ವಿನಿಮಯ ಕೇಂದ್ರದಲ್ಲಿ 32 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದ ತೊತ್ತಿಯನ ಕೇಶವಯ್ಯ ಅವರನ್ನು ಸನ್ಮಾನಿಸಲಾಯಿತು. ಕೊಡಗು ಗೌಡ ಯುವ ವೇದಿಕೆ ಹಾಗೂ ಯಡವಾರೆ ಗ್ರಾಮದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು.

ಸಭಾ ಕಾರ್ಯಕ್ರಮದಲ್ಲಿ ಖಜಾಂಚಿ ಬಾರನ ಭರತಕುಮಾರ್, ಕಡ್ಲೇರ ಹೊನ್ನಪ್ಪ, ಕಾಳೇರಮ್ಮನ ರಾಯ್, ಬಾರನ ಪ್ರಮೋದ್, ಕೂಡಕಂಡಿ ಧೀರಜ್ ಹಾಜರಿದ್ದರು. ಸಭಾ ಕಾರ್ಯಕ್ರಮ ಮತ್ತು ಪಂದ್ಯಾಟಗಳ ನಿರೂಪಣೆ ಮತ್ತು ವಿವರಣೆಯನ್ನು ಬೈಲೆ ಅಶ್ವಿನಿ ಮೋಹನ್ ಮತ್ತು ಮೂಲೆಮಜಲು ಕವನ ಮನೋಜ್ ನೀಡಿದರೆ, ಮೂಲೆಮಜಲು ಮನೋಜ್ ಸ್ವಾಗತಿಸಿ, ನಂಗಾರು ಗಿರೀಶ್ ವಂದಿಸಿದರು.