ಮಡಿಕೇರಿ, ಅ. 14: ಮಧ್ಯಪ್ರದೇಶದಿಂದ ಕೊಡಗಿಗೆ ಪ್ರವಾಸ ಬಂದಿದ್ದ ತಂಡವೊಂದು ಪ್ರಯಾಣಿಸುತ್ತಿದ್ದ ಟೆಂಪೋ ಟ್ರಾವಲ್ ಹಾಗೂ ಬೆಂಗಳೂರಿನಿಂದ ಮಡಿಕೇರಿಗೆ ಪ್ರವಾಸ ಬರುತ್ತಿದ್ದ ತಂಡವೊಂದರ ಕಾರಿನ ನಡುವೆ ಇಂದು ಮಧ್ಯಾಹ್ನ ಕೆದಕಲ್ ಬಳಿ ಡಿಕ್ಕಿ ಸಂಭವಿಸಿದೆ.

ಅಪಘಾತ ಸಂದರ್ಭ ಟೆಂಪೋ ಚಾಲಕ ರಾಜೇಂದ್ರ ಎಂಬವರ ಹತೋಟಿ ತಪ್ಪಿದ ವಾಹನ ಮಗುಚಿ ಬಿದ್ದಿದ್ದು, ಕಾರು ಚಾಲಕ ಅಬ್ದುಲ್ಲಾ ಎಂಬವರ ಅಜಾಗರೂಕತೆಯಿಂದ ಜಖಂಗೊಂಡಿದೆ.

ಟೆಂಪೋ ಮಗುಚಿಕೊಂಡ ವೇಳೆ ನಾಲ್ಕೈದು ಪ್ರಯಾಣಿಕರು ಗಾಯಗೊಂಡು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮಧ್ಯಪ್ರದೇಶ ಮಂದಿಯು ಪ್ರಯಾಣಿಸುತ್ತಿದ್ದ ವಾಹನ ಮೈಸೂರಿನದ್ದಾಗಿದ್ದು, ಕಾರು ಬೆಂಗಳೂರಿನಿಂದ ಬರುತ್ತಿದ್ದುದಾಗಿ ತಿಳಿದುಬಂದಿದೆ.

ಈ ಸಂಬಂಧ ಸುಂಟಿಕೊಪ್ಪ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. -ಟಿ.ಜಿ. ಸತೀಶ್.