ವೀರಾಜಪೇಟೆ, ಅ. 14: ವೀರಾಜಪೇಟೆಯಲ್ಲಿ ಮನೆ-ಮನೆಗೆ ಕಾಂಗ್ರೆಸ್ ನಡೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ತಿಂಗಳ ಅಂತ್ಯಕ್ಕೆ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವದು ಎಂದು ಕಾಂಗ್ರೆಸ್ ಪಕ್ಷದ ಕೊಡಗು ಜಿಲ್ಲಾ ಅಧ್ಯಕ್ಷ ಶಿವು ಮಾದಪ್ಪ ಹೇಳಿದರು.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಸಮಿತಿಯಿಂದ ಹಮ್ಮಿಕೊಂಡಿದ್ದ ಮನೆ-ಮನೆಗೆ ಕಾಂಗ್ರೆಸ್ ನಡೆಯ ನಂತರ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಬೂತ್, ವಲಯ ಅಧ್ಯಕ್ಷರುಗಳು, ಪ್ರಮುಖ ಕಾರ್ಯಕರ್ತರುಗಳ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಪಕ್ಷದ ಕೊಡಗು ಉಸ್ತುವಾರಿ ಮಂಗಳೂರಿನ ಮಮತಾ ಗಟ್ಟಿ ಮಾತನಾಡಿ, ಇನ್ನು ಚುನಾವಣಗೆ ಅಲ್ಪ ಸಮಯವಿದೆ. ಕಾಂಗ್ರೆಸ್ ಪಕ್ಷದ ಸಾಧನೆಗಳ ಪಟ್ಟಿಯನ್ನು ಕಾರ್ಯಕರ್ತರು ಚಾಚು ತಪ್ಪದೆ ಜನತೆಯ ಮುಂದಿಡಬೇಕು ಎಂದು ಹೇಳಿದರು.

ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿದರು. ಮೈಸೂರಿನ ಮಾಜಿ ಮೇಯರ್‍ಗಳಾದ ಶ್ರೀಕಂಠಯ್ಯ, ಪುಷ್ಪಲತಾ, ಐ.ಎನ್.ಟಿ.ಯು.ಸಿ.ಯ ರಾಜ್ಯ ಸಮಿತಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ. ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿ ಉಪಾಧ್ಯಕ್ಷ ಪಿ.ಸಿ. ಹಸೈನಾರ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್, ಜಿಲ್ಲೆಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯಾಕೂಬ್ ಮತ್ತಿತರರು ಮಾತನಾಡಿದರು.

ವೇದಿಕೆಯಲ್ಲಿ ಡಿ.ಸಿ. ಧ್ರುವ, ಏಜಾಜ್ ಅಹ್ಮದ್ ಜಲ್ಲೆಯ ಸೇವಾದಳ ಸಮಿತಿ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ವಕ್ತಾರ ಎಂ.ಎಸ್. ಪೂವಯ್ಯ ಮೊದಲಾದವರು ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ವಹಿಸಿದ್ದರು. ಕಾರ್ಯದರ್ಶಿ ಎಂ.ಎಂ. ಶಶಿಧರ್ ಹಾಗೂ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಾನ್‍ಸನ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನಾದ್ಯಂತ ಪಕ್ಷದ ವಲಯ, ಬೂತ್ ಮಟ್ಟದ ಕಾರ್ಯಕರ್ತರುಗಳು ಮಹಿಳಾ ಘಟಕದ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವೀರಾಜಪೇಟೆಯ ತೆಲುಗರಬೀದಿಯ ಮಾರಿಯಮ್ಮ ದೇವಾಲಯದ ಬಳಿ ಮನೆ-ಮನೆಗೆ ಕಾಂಗ್ರೆಸ್ ನಡಿಗೆಗೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಚಾಲನೆ ನೀಡಿದರು. ನಂತರ ಮೆರವಣಿಗೆಯಲ್ಲಿ ತೆರಳಿದ ಪಕ್ಷದ ಕಾರ್ಯಕರ್ತರು ತೆಲುಗರಬೀದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಮುಖ್ಯ ರಸ್ತೆಯ ಮಾರ್ಗವಾಗಿ ಮನೆ ಮನೆಗೆ ಪಕ್ಷದ ಕಿರು ಹೊತ್ತಿಗೆ ವಿತರಣೆ ಮಾಡಿ ಪಕ್ಷದ ಸಾಧನೆಗಳ ಅರಿವು ಮೂಡಿಸುವ ಕಾರ್ಯ ಮಾಡಿದರು.

ಮೆರವಣಿಗೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಬ್ಲಾಕ್ ಉಪಾಧ್ಯಕ್ಷ ಪಿ.ಎ. ಹನೀಫ್, ಸೇವಾದಳದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎಲ್. ಸೈನುದ್ದೀನ್, ನಗರ ಸಮಿತಿಯ ಜಿ.ಜಿ. ಮೋಹನ್, ಚೇರಿನ್ ಚಂಗಪ್ಪ, ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಮಹಮ್ಮದ್ ರಾಫಿ, ಕರುಣ್ ಕಾಳಯ್ಯ, ಪೃಥ್ವಿನಾಥ್, ಮರ್ವೀನ್ ಲೊಬೋ, ಶರಣು ನಂಜಪ್ಪ ಇತರ ಕಾರ್ಯಕರ್ತರು ಭಾಗವಹಿಸಿದ್ದರು.