ಗೋಣಿಕೊಪ್ಪಲು,ಅ.14: ಚೆನ್ನಂಗೊಲ್ಲಿ-ಬಾಳೆಲೆ ರಸ್ತೆ ಅಭಿವೃದ್ಧಿಗೊಂಡು 10 ವರ್ಷವೇ ಕಳೆದಿದ್ದರೂ, ಬೆಮ್ಮತ್ತಿ-ಕೋಣನಕಟ್ಟೆ ರಸ್ತೆ ಅಗಲೀಕರಣಗೊಳ್ಳದೆ, ಡಾಂಬರೀಕರಣ ಮಾಡದೆ ನಿರ್ಲಕ್ಷ್ಯ ತಾಳಲಾಗಿತ್ತು. ಈ ನಿಟ್ಟಿನಲ್ಲಿ ಇದೀಗ ಸುಮಾರು ರೂ.85 ಲಕ್ಷ ವೆಚ್ಚದಲ್ಲಿ ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ಬೆಮ್ಮತ್ತಿ-ಕೋಣನಕಟ್ಟೆ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣಕ್ಕಾಗಿ ಇಂದು ಗುದ್ದಲಿಪೂಜೆಯನ್ನು ಮಾಯಮುಡಿ ಮುರುಡೇಶ್ವರ ದೇವಸ್ಥಾನ ಮುಂಭಾಗ ನೆರವೇರಿಸಲಾಯಿತು.

ಇದೇ ಸಂದರ್ಭ ಚೆನ್ನಂಗೊಲ್ಲಿ ಯಿಂದ ಮಾಯಮುಡಿ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸುಮಾರು ರೂ.44 ಲಕ್ಷ ವೆಚ್ಚದ ಕಾಮಗಾರಿ ನಡೆಯಲಿದೆ ಎಂದು ಜಿ.ಪಂ. ಸದಸ್ಯ ಬಿ.ಎನ್.ಪ್ರಥ್ಯು ತಿಳಿಸಿದ್ದಾರೆ.

ಗುದ್ದಲಿಪೂಜೆಯನ್ನು ನೆರವೇರಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್‍ಮಾಚಯ್ಯ ಅವರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಕಾಮಗಾರಿ ಸಂದರ್ಭ ಗುಣಮಟ್ಟದ ಬಗ್ಗೆ ನಿಗಾವಹಿಸುವಂತೆ ಸಲಹೆ ನೀಡಿದರು.

ಗುದ್ದಲಿಪೂಜೆ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ ಭವಾನಿ ಮೋಹನ್, ಮಾಜಿ ತಾ.ಪಂ.ಸದಸ್ಯ ಟಾಟೂ ಮೊಣ್ಣಪ್ಪ, ಪೆÇನ್ನಂಪೇಟೆ ಬ್ಲಾಕ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ರಹಮಾನ್ ಬಾಪು, ಗ್ರಾ.ಪಂ.ಸದಸ್ಯರಾದ ಟಿಪ್ಪು ಬಿದ್ದಪ್ಪ, ಟಿ.ವಿ.ಶ್ರೀಧರ್, ಮಣಿಕುಂಜ್ಞ, ರುಕ್ಮಿಣಿ ಬಿ.ಎಸ್., ಶಾಂತಾ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಸ್. ಸುರೇಶ್, ಬುಸುರಾ, ಸಹಕಾರ ಬ್ಯಾಂಕ್ ಉಪಾಧ್ಯಕ್ಷೆ ಶಿಲ್ಪಾ ಮಾದಪ್ಪ, ರಾಯ್ ಮಾದಪ್ಪ, ಚೆಕ್ಕೇರ ಮಧು, ಸಿ.ಕೆ.ಚಿಣ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.