ಮಡಿಕೇರಿ, ಅ.16: ಕೇಂದ್ರ ಸರಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅದು ತನ್ನ ಸರಕಾರದ ಕಾರ್ಯಕ್ರಮವೆಂದು ಹೇಳುತ್ತಿರುವದಾಗಿ ಸಂಸದ ಪ್ರತಾಪ್ ಸಿಂಹ ಅವರು ಹೇಳುತ್ತಿರುವದು ಶೋಭೆ ತರುವದಿಲ್ಲವೆಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಸರಕಾರ ಜನಪರವಾದ ನೂರಾರು ಕಾರ್ಯಕ್ರಮಗಳನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅನುಷ್ಠಾನಗೊಳಿಸಿದ್ದು, ಅದ್ಯಾವದೂ ಕೇಂದ್ರ ಸರಕಾರದ ಯೋಜನೆಗಳಲ್ಲವೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಯಾವದೇ ಪಕ್ಷದ ಸರಕಾರವಿದ್ದರೂ ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿರುವದು ಸರಕಾರದ ಕರ್ತವ್ಯವಾಗಿರುತ್ತದೆ, ಹಸಿವು ಮುಕ್ತ ಕರ್ನಾಟಕದ ಅನ್ನಭಾಗ್ಯ ಯೋಜನೆ, ಶಾಲಾ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದ ಕ್ಷೀರ ಭಾಗ್ಯ ಯೋಜನೆ, ಇದೀಗ ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳವರೆಗೂ ತಲುಪಿದೆ. ವಿದ್ಯಾಸಿರಿ ಯೋಜನೆ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ ಕಾರ್ಯಕ್ರಮವಾಗಿದೆ ಎಂದು ಅವರು ವಿವರಿಸಿದ್ದಾರೆ.

ಆರೋಗ್ಯ ಶ್ರೀ ಯೋಜನೆ, ಕೃಷಿಭಾಗ್ಯ ಯೋಜನೆ, ಮಾತೃಪೂರ್ಣ ಯೋಜನೆ, ಬಡ, ಬಿದಾಯಿ ಯೋಜನೆಗಳೆಲ್ಲವೂ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಪ್ರಗತಿಪರ ಕಾರ್ಯಕ್ರಮಗಳಾಗಿದ್ದು, ಇವುಗಳು ಯಾವುದೂ ಕೇಂದ್ರ ಸರಕಾರದ ಕಾರ್ಯಕ್ರಮಗಳಲ್ಲವೆಂದು ಅವರು ಹೇಳಿದ್ದಾರೆ. ಸಹಕಾರ ಸಂಘಗಳಿಂದ ಸಾಲ ಪಡೆದ ರೈತರ ರೂ.50 ಸಾವಿರ ಮನ್ನಾ ಮಾಡಿದ ನಿರ್ಧಾರ ಮುಖ್ಯಮಂತ್ರಿಗಳು ತೆಗೆದುಕೊಂಡ ದಿಟ್ಟ ಹೆಜ್ಜೆಯಾಗಿದೆ. ಆದರೆ ಕೇಂದ್ರ ಸರಕಾರ ಇಲ್ಲಿಯವರೆಗೂ ರೈತರ ಪರವಾದ ಯಾವದೇ ಕಾಳಜಿಯನ್ನು ತೋರಿಲ್ಲವೆಂದು ರಮೇಶ್ ಹೇಳಿದ್ದಾರೆ.

ದೇವಾಲಯಗಳು, ಚರ್ಚ್, ಮದರಸ ಹಾಗೂ ವಿವಿಧ ಪ್ರಾರ್ಥನಾ ಮಂದಿರಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಹಕರಿಸಿ ಸರ್ವಧರ್ಮ ಸಮನ್ವಯತೆಯನ್ನು ಸಾಧಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಶೇ.70 ಮೀಸಲಾತಿ ತರುವ ನಿರ್ಧಾರಕ್ಕೆ ಮುಖ್ಯಮಂತ್ರಿಗಳು ಬಂದಿದ್ದು, ಇದು ಅನುಷ್ಠಾನಗೊಂಡಲ್ಲಿ ಪ್ರವರ್ಗ 1, 2 ಎ, 3 ಎ ಮತ್ತು 3 ಬಿ ಅಡಿಯಲ್ಲಿ ಬರುವ ಸಮುದಾಯಗಳಿಗೆ ಇದರಿಂದ ಹೆಚ್ಚಿನ ಸೌಲಭ್ಯ ದೊರಕಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.

ಬಸವಣ್ಣನವರ ಭಾವಚಿತ್ರವನ್ನು ಸರಕಾರಿ ಕಚೇರಿಗಳಲ್ಲಿ ಹಾಕುವ ಮೂಲಕ 800 ವರ್ಷಗಳ ಹಿಂದೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಬಸವಣ್ಣನವರನ್ನು ಎಲ್ಲರೂ ನೆನಪಿಸುವಂತೆ ಮಾಡಲಾಗಿದೆ. ಅಧಿಕಾರ ವಿಕೇಂದ್ರೀಕರಣದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯÀಕ್ಷ ಮತ್ತು ಸದಸ್ಯರುಗಳಿಗೆ ಗೌರವ ಸಂಭಾವನೆ ಏರಿಕೆ, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರಿಗೆ ಗೌರವ ಸಂಭಾವನೆ ಏರಿಕೆ, 94 ಸಿ ಮತ್ತು 94 ಸಿಸಿ ಕಾಯ್ದೆಯಡಿಯಲ್ಲಿ ಸರಕಾರಿ ನಿವೇಶನದಲ್ಲಿ ಮನೆ ಕಟ್ಟಿ ಕುಳಿತವರಿಗೆ ನಿವೇಶನದ ಹಕ್ಕುಪತ್ರ ವಿತರಣೆ ಹೀಗೆ ರಾಜ್ಯ ಸರಕಾರದ ಹತ್ತು ಹಲವು ಕಾರ್ಯಕ್ರಮಗಳು ಜನಮೆಚ್ಚುಗೆಯನ್ನು ಪಡೆದಿವೆ. ಇಂದಿರಾ ಕ್ಯಾಂಟೀನ್‍ನ್ನು ಜಿಲ್ಲಾ ಮತ್ತು ತಾಲ್ಲೂಕು ಹಂತದವರೆಗೆ ವಿಸ್ತರಿಸಲು, ಯಶಸ್ವಿನಿ ಯೋಜನೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಲು, ಸ್ತ್ರೀಶಕ್ತಿ ಸಂಘಗಳ ಸದಸ್ಯರ ಸ್ವಾವಲಂಬನೆಯ ಬದುಕಿಗೆ ಆರ್ಥಿಕ ಸೌಲಭ್ಯ, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ತೀರಾ ಬಡ ಬಗ್ಗರಿಗೆ ಮನೆ ನಿವೇಶನಗಳ ವಿತರಣೆ ಮತ್ತು ಬುಡಕಟ್ಟು ಸಮುದಾಯಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮಗಳು ರಾಜ್ಯದಲ್ಲಿ ತ್ವರಿತವಾಗಿ ಜಾರಿಯಾಗುತ್ತಿದ್ದು, ಇವುಗಳೆಲ್ಲವೂ ರಾಜ್ಯ ಸರಕಾರದ ಕಾರ್ಯಕ್ರಮವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಬರಪೀಡಿತ ಪ್ರದೇಶದಲ್ಲಿ ಮೋಡ ಬಿತ್ತನೆ ಕಾರ್ಯಕ್ರಮಗಳು ಹಾಗೂ ಕೇಂದ್ರ ಸರಕಾರದ ಸುಲಭ ಶೌಚಾಲಯಗಳ ನಿರ್ಮಾಣ, ಸ್ವಚ್ಛ ಭಾರತದ ಕಾರ್ಯಕ್ರಮಗಳನ್ನು ನಾಡಿನೆಲ್ಲೆಡೆ ಯಶಸ್ವಿಯಾಗಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.