ಕೂಡಿಗೆ, ಅ. 20: ಕುಶಾಲನಗರ ಹೋಬಳಿ ಶಿರಂಗಾಲದಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ದೊರೆಯಿತು. ಶಿರಂಗಾಲ ಗೇಟ್‍ನಲ್ಲಿ ಕರ್ನಾಟಕ ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸುವ ಯೋಜನೆಯನ್ವಯ ಜಿಲ್ಲಾ ಐಎನ್‍ಟಿಯುಸಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಯಿಂದ ಶಿರಂಗಾಲ ವ್ಯಾಪ್ತಿಯ ಮೂಡಲಕೊಪ್ಪಲು, ನಲ್ಲೂರು, ಮಣಜೂರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ, ಕರಪತ್ರಗಳನ್ನು ಹಂಚುವ ಮೂಲಕ ರಾಜ್ಯ ಸರಕಾರದ ಸಾಧನೆಗಳನ್ನು ತಿಳಿಸುವಲ್ಲಿ ಮುಂದಾಗಿದ್ದೇವೆ ಎಂದರು.

ರಾಜ್ಯ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ, ಅನಕ್ಷರತೆ ಮುಕ್ತ ಕರ್ನಾಟಕ-ಎಲ್ಲರಿಗೂ ಶಿಕ್ಷಣ, ನ್ಯಾಯ, ಅಲ್ಪಸಂಖ್ಯಾತ ಕಲ್ಯಾಣ, ರೈತರ ಕಲ್ಯಾಣ, ಸಾಲ ಹಾಗೂ ಬಡ್ಡಿ ಮನ್ನಾ, ಹೈದರಾಬಾದ್-ಕರ್ನಾಟಕ ಅಭಿವೃದ್ಧಿ, ಜಲಸಿರಿ, ವಿಶ್ವೇಶ್ವರಯ್ಯ ಜಲ ನಿಗಮ, ಸಣ್ಣ ನೀರಾವರಿ, ಕೃಷಿಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ ಇನ್ನಿತರ ಯೋಜನೆಗಳ ಬಗ್ಗೆ ಕರಪತ್ರದ ಮೂಲಕ ಜನರಿಗೆ ಮನದಟ್ಟು ಮಾಡಲಾಗುತ್ತಿದೆ ಎಂದರು.

ಅಭಿಯಾನದಲ್ಲಿ ಕೊಡಗು ಜಿಲ್ಲಾ ಐಎನ್‍ಟಿಯೂಸಿ ಅಧ್ಯಕ್ಷ ಟಿ.ಪಿ. ಹಮೀದ್, ಪ್ರಧಾನ ಕಾರ್ಯದರ್ಶಿ ಧರ್ಮಪ್ಪ, ಗೋವಿಂದ್ ರಾಜ್‍ದಾಸ್, ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕಿಶೋರ್ ಕುಮಾರ್, ತಾರಾ ಉದಯ್, ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಗುಡ್ಡೆಹೊಸೂರು ಚಂದ್ರಶೇಖರ್, ಅಶ್ರಫ್, ಐಎನ್‍ಟಿಯೂಸಿ ಯುವ ಘಟಕದ ಮುಖಂಡ ತ್ರಿಣೇಶ್, ಕಾಂಗ್ರೆಸ್ ಮುಖಂಡರುಗಳಾದ ವಿಜಯ್‍ಕುಮಾರ್, ಶ್ರೀನಿವಾಸ್, ಬೇಲಯ್ಯ, ವಿವೇಕಾನಂದ, ಎನ್.ಆರ್. ಮಂಜುನಾಥ್, ಚಂದ್ರಶೇಖರ, ಹರೀಶ್ ಸೇರಿದಂತೆ ಕಾಂಗ್ರೆಸ್‍ನ ಕಾರ್ಯಕರ್ತರು ಇದ್ದರು.