ಶ್ರೀಮಂಗಲ, ಅ. 20: ಐತಿಹಾಸಿಕ ಹಿನ್ನೆಲೆ ಇರುವ ತಾವಳಗೇರಿ ಮೂಂದ್‍ನಾಡ್ ಪೆರುಮಾಳ್ ಪಟ್ಟಿ ನ್ಯಾಯಪೀಠವು ಹಲವಾರು ಪುಕಾರುಗಳನ್ನು ತೀರ್ಮಾನ ಮಾಡಿದ ಇತಿಹಾಸವಿದೆ. ಈ ನ್ಯಾಯಪೀಠವನ್ನು ಮತ್ತೆ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ ಸ್ಥಾಪಿಸಿ ನ್ಯಾಯ ತೀರ್ಮಾನ ಮಾಡುವಂತಾಗಬೇಕೆಂದು ಕಾರ್ಯಕ್ರಮದ ಪ್ರಾಯೋಜಕರು ಹಾಗೂ ಮುಖ್ಯ ಅತಿಥಿಗಳಾದ ಮಂದಮಡ ತೇಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ, ಸಾರ್ವಜನಿಕ ಗೌರಿಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಮತ್ತು ಸಾಂಸ್ಕøತಿಕ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಸಂಯುಕ್ತ ಆಶ್ರಯದಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಚಂಗ್ರಾಂದಿ-ಪತ್ತಾಲೋದಿ ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪೊಲೀಸ್ ಠಾಣೆ, ಕೋರ್ಟು ಕಚೇರಿಗಳ ಅಲೆದಾಟವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಸಲಹೆನೀಡಿದರು. ಈ ಸಂದರ್ಭ ಯಜ್ಞ, ಯಾಗಗಳನ್ನು ಮಾಡುವದರಿಂದ ಹೇಗೆ ನಾಡಿಗೆ ಸುಭಿಕ್ಷೆಯಾಗುತ್ತದೊ ಅದೇ ರೀತಿ ಕಾವೇರಿ ಪುಣ್ಯ ತೀರ್ಥ ವಿತರಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಿ ನಾಡಿನ ಸುಭಿಕ್ಷೆಗೆ ನಾಂದಿ ಹಾಡಿರುವ ಕೊಡವ ಸಮಾಜ ಹಾಗೂ ಇತರ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಕ್ರೀಡೆ ಹಾಗೂ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಮಾತನಾಡಿ ಬ್ರಹ್ಮ ದೇವರ ಮಾನಸ ಪುತ್ರಿ ಕಾವೇರಿಯು ಪುಣ್ಯ ತೀರ್ಥ ರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ಚಂಗ್ರಾಂದಿ ಹಬ್ಬದ ದಿನ ಮಾಂಸಾಹಾರವನ್ನು ಎಲ್ಲರು ತ್ಯಜಿಸಬೇಕು ಹಾಗೂ ಆ ದಿನ ಮಾಂಸ ಮಾರಾಟ ನೀಷೇದಿಸುವಂತೆ ಗ್ರಾಮ ಪಂಚಾಯಿತಿಗೆ ಕೊಡವ ಸಮಾಜದಿಂದ ಮನವಿ ಮಾಡುವ ಹಾಗೂ ಕಾವೇರಿ ಚಂಗ್ರಾಂದಿಯ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸುವಂತೆ ಅಖಿಲ ಕೊಡವ ಸಮಾಜ ಮತ್ತು ಕೊಡವ ಸಮಾಜ ಒಕ್ಕೂಟ ಸರ್ಕಾರವನ್ನು ಒತ್ತಾಯಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣರವರು ಜನಾಂಗದ ಅಭಿವೃದ್ಧಿ, ಹಬ್ಬದ ಪಾವಿತ್ರ್ಯತೆ ಹಾಗೂ ಸಂಸ್ಕøತಿಯ ಉಳಿವಿಗೆ ತಾ. 27ರವರೆಗೆ ಹಮ್ಮಿಕೊಂಡಿರುವ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು.

ವೇದಿಕೆಯಲ್ಲಿ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಸ್ಥೆಯ ಉಪಾಧ್ಯಕ್ಷೆ ಚಂಗುಲಂಡ ಅಶ್ವಿನಿ ಸತೀಶ್, ಕಾರ್ಯಕ್ರಮದ ಪ್ರಾಯೋಜಕಿ ಮಂದಮಾಡ ಗೀತಾ ತೇಜಪ್ಪ ಉಪಸ್ಥಿತರಿದ್ದರು.

ಈ ಸಂದರ್ಭ ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ, ಹುದಿಕೇರಿ ಮಹದೇವ ಯುವಕ ಸಂಘದ ಸದಸ್ಯರ ಕೊಡವ ಜಾನಪದ ನೃತ್ಯ, ನಾಳಿಯಮ್ಮಂಡ ವೀಣರವರ ಹಾಡುಗಾರಿಕೆ ಹಾಗೂ ಚಿಮ್ಮಚ್ಚೀರ ಪವಿತ ರಜನ್‍ರವರ ಕವನ ವಾಚನ ನೆರೆದಿದ್ದ ಜನರನ್ನು ರಂಜಿಸಿತು.

ಇಂದಿನ ಕಾರ್ಯಕ್ರಮ

ಸಂಜೆ 4 ಗಂಟೆಗೆ ಶ್ರೀಮಂಗಲ ಜೆ.ಸಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಖ್ಯಾತ ಚಿತ್ರಕಲಾವಿದ ಬಿ.ಆರ್ ಸತೀಶ್‍ರವರಿಂದ ಚಿತ್ರಕಲೆ.