ವೀರಾಜಪೇಟೆ, ಅ. 19: ವೀರಾಜಪೇಟೆ ತಾಲೂಕು ಗೌಡ ಸಮಾಜದಿಂದ ತಾ:22ರಂದು ಕೈಲು ಮುಹೂರ್ತ ಸಂತೋಷ ಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಮೂಡಗದ್ದೆ ರಾಮಕೃಷ್ಣ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಗೌಡ ಸಮಾಜದ ಸಮುದಾಯ ಬಾಂಧವರಲ್ಲಿ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಹಾಗೂ ಜನಾಂಗದಲ್ಲಿ ಪ್ರತಿಭೆಗಳನ್ನು ಗುರುತಿಸಿ ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಗೌಡ ಸಮಾಜದ ಕೈಲು ಮುಹೂರ್ತ ಸಂತೋಷ ಕೂಟ ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಚಂಡೀರ ಎ. ಸುಂದರ ಮಾತನಾಡಿ ವೀರಾಜಪೇಟೆ ಬಳಿಯ ಕೆ. ಬೋಯಿಕೇರಿಯ ಕುರುಂಜಿ ಜಾನಕಿ ವೆಂಕಟರಮಣ ಸಮುದಾಯ ಭವನದಲ್ಲಿ ಅಪರಾಹ್ನ 2-30ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಾಸಕ ಬೋಪಯ್ಯ, ಮಡಿಕೇರಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸುರ್ತಲೆ ಸೋಮಣ್ಣ, ಡಾ. ಕೋಟ್ಟಕೇರಿಯನ ಲಾವಣ್ಯ ಅರುಣ್ ಕುಮಾರ್, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯನಂದಾ, ಸ್ಪೈಸಸ್ ಬೋರ್ಡ್‍ನ ನಿವೃತ್ತ ಉದ್ಯೋಗಿ ಅಯ್ಯಂಡ್ರ ಗಿರೀಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಘದ ನಿರ್ದೇಶಕಿ ತೋಟಂಬೈಲು ಕಾವೇರಮ್ಮ ಅಪ್ಪಚ್ಚು ಮಾತನಾಡಿ ಗೌಡ ಸಮಾಜದ ಕೈಲು ಮಹೂರ್ತ ಸಂತೋಷಕೂಟದ ಪ್ರಯುಕ್ತ ಅರೆಭಾಷೆ ಗೌಡ ಜನಾಂಗದವರಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಕ್ಕಳಿಗೆ ಕಾಳು ಹೆಕ್ಕುವದು, ಇತರ ಆಟೋಟ ಸ್ಪರ್ಧೆಗಳು, ಮಹಿಳೆಯರು ಪುರುಷರಿಗಾಗಿ ಹಗ್ಗ ಜಗ್ಗಾಟ ಹಾಗೂ ಸ್ಲೋ ಬೈಕ್ ರೇಸ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಕತ್ರಿಕೊಲ್ಲಿ ನಂಜುಂಡ, ಪೊಕ್ಕುಳಂಡ್ರ ಪಾರ್ವತಿ ಗಣಪತಿ ಹಾಗೂ ಮುಕ್ಕಾಟಿರ ಗಣಪತಿ ಉಪಸ್ಥಿತರಿದ್ದರು.