ಕೂಡಿಗೆ, ಅ. 22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸೋಮವಾರಪೇಟೆ ಕೃಷಿ ಇಲಾಖೆ ಸಹಯೋಗದೊಂದಿಗೆ ಇಲ್ಲಿನ ಕೃಷಿ ಇಲಾಖೆಯ ಆವರಣದಲ್ಲಿ ಕೃಷಿ ವಿಚಾರ ಸಂಕೀರಣ ಕಾರ್ಯಕ್ರಮ ನಡೆಯಿತು.

ಕೂಡಿಗೆ ಕೃಷಿ ಮಹಿಳಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಕೋಮಲ ಉದ್ಘಾಟಿಸಿ, ನಂತರ ಮಾತನಾಡುತ್ತಾ ಕೃಷಿಗೆ ಸಂಬಂಧಪಟ್ಟ ವಿಚಾರ ಸಂಕೀರ್ಣಗಳಿಂದ ರೈತರುಗಳಿಗೆ ಹೆಚ್ಚು ಮಹತ್ವದ ವಿಚಾರಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಟಿ. ಅರುಣ್ ಕುಮಾರ್ ಮಾತನಾಡಿ, ರೈತರಿಗೆ ಇಂತಹ ತರಬೇತಿಗಳಿಂದ ಹೊಸ ಹೊಸ ತಳಿಗಳ ಬಗ್ಗೆ ತಿಳಿದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು, ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರಯೋಜನಕಾರಿಯಾಗುತ್ತವೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಪ್ರಕಾಶ್ ಮಾತನಾಡಿ, ಕೃಷಿಗೆ ಸಂಬಂಧಪಟ್ಟಂತೆ ಹಲವಾರು ಯೋಜನೆಗಳಿದ್ದು, ಅವುಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಪೊನ್ನಂಪೇಟೆಯ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಷಯ ತಜ್ಞರಾದ ವಿರೇಂದ್ರ ಮಾತನಾಡಿ, ರೈತರ ಬೆಳೆಗಳಿಗೆ ಈಗಾಗಲೇ ಅನೇಕ ರೋಗಗಳು ಹರಡುತ್ತಿದ್ದು, ಅವುಗಳ ನಿರ್ವಹಣೆಗೆ ಅನುಸರಿಸಬೇಕಾದ ವಿಷಯಗಳ ಬಗ್ಗೆ ರೈತರಿಗೆ ತಿಳಿಸಿದರು. ಪಾಲಿಹೌಸ್ ಕೃಷಿ ಮತ್ತು ಸಸ್ಯ ಸಂರಕ್ಷಣೆ ವಿಷಯದ ಬಗ್ಗೆ ಕೃಷಿ ತಜ್ಞರುಗಳಾದ ಕಾವ್ಯ ಮತ್ತು ಗೀತಾ ಮಾಹಿತಿ ನೀಡಿದರು. ಈ ಸಂದರ್ಭ ಕೂಡಿಗೆ ವಲಯ ಮೇಲ್ವಿಚಾರಕರಾದ ರೇಣುಕಾ ಹಾಗೂ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.