ಇಬ್ಬರು ಗಂಭೀರ : ಮೂವರ ಬಂಧನ ವೀರಾಜಪೇಟೆ, ಅ. 23 ವೀರಾಜಪೇಟೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ನಿನ್ನೆ ರಾತ್ರಿ ನಡೆದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಇಬ್ಬರನ್ನು ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ನಿನ್ನೆ ರಾತ್ರಿ 7ಗಂಟೆಗೆ ಬೊಳ್ಳುಮಾಡುವಿನ ಬೆಳ್ಳಿಯಪ್ಪ, ಕೋಟೆಕೊಪ್ಪಲಿನ ಉಮೇಶ್ ಹಾಗೂ ಅನಿಲ್ ಎಂಬ ಮೂರು ಮಂದಿ ಮಾರುತಿ 800 ಕಾರಿನಲ್ಲಿ ಸಾರಿಗೆ ಬಸ್ಸು ನಿಲ್ದಾಣದ ಬಳಿ ಹೋಗುತ್ತಿದ್ದಾಗ ಕೇರಳದ ಕಡೆಯಿಂದ ಬಂದ ನಂ.ಕೆ.ಎಲ್.58-ಟಿ.3313 ರ ವರ್ಣ ಕಾರು ಅದರ ಹಿಂದಿನ ಕಾರಿಗೆ ತಿರುಗಿಸುವ ಸೂಚನೆ ನೀಡದೆ ಕಾರನ್ನು ತಿರುಗಿಸಿ ನಿಲ್ದಾಣದ ಶೌಚಾಲಯದ ಬಳಿಗೆ ತೆರಳಿತು. ಇದೇ ಸಂದರ್ಭದಲ್ಲಿ ಇದೇ ಕ್ಷುಲ್ಲಕ ವಿಷಯಕ್ಕಾಗಿ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿದಾಗ ಕೇರಳದ ಕಾರಿನಲ್ಲಿದ್ದ ರಷೀದ್ ಎಂಬಾತನು ಬೆಳ್ಯಪ್ಪನ ತಲೆಗೆ ಹಿಂಬದಿಯಿಂದ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದನು. ಗಂಭೀರ ಸ್ಥಿತಿಯಲ್ಲಿದ್ದ ಬೆಳೈಪ್ಪನನ್ನು ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಗೆ ಸೇರಿಸಲಾಗಿದೆ.